ದಾವಣಗೆರೆ (Davanagere): ಒತ್ತುವರಿಯಾಗಿರುವ ಗೋಮಾಳ ಜಮೀನು ಮತ್ತು ಕೆರೆಯನ್ನು ಆಧುನಿಕ ಉಪಕರಣಗಳಿಂದ ಹದ್ದು ಬಸ್ತ್ ಮಾಡಬೇಕೆಂದು ಒತ್ತಾಯಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಾಲೂಕಿನ ಕಬ್ಬೂರು ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ಟ್ರ್ಯಾಕ್ಟರ್ ನಲ್ಲಿ ಆಗಮಿಸಿದ್ದ ಗ್ರಾಮಸ್ಥರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಕಬ್ಬೂರು ಗ್ರಾಮದ ಸರ್ವೆ ನಂ.31 ರಲ್ಲಿ 71 ಎಕರೆ, ಸರ್ವೆ ನಂ.32 ರಲ್ಲಿ ಗೋಮಾಳ ಜಮೀನು ಇದೆ. ಸರ್ಕಾರಿ ಗೋಮಾಳ ಜಮೀನಿನಲ್ಲಿದ್ದ ಸ್ಮಶಾನದ ವಿರೂಪ, ಅಕ್ರಮವಾಗಿ ಮಣ್ಣು ಸಾಗಾಣಿಕೆ ಮತ್ತು ಪೂರ್ವಜರ ಸಮಾಧಿಗಳನ್ನು, ಅಸ್ಥಿಪಂಜರ ನಾಶ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಮತ್ತು ಒತ್ತುವರಿಯಾಗಿರುವ ಗೋಮಾಳ ಜಮೀನು ಹಾಗೂ ಕೆರೆಯನ್ನು ಈಗಾಗಲೇ ಐದಾರು ಬಾರಿ ಅಳತೆ ಮಾಡಲಾಗಿದೆ. ಆದರೆ ಅಳತೆ ಮಾಡಲು ಬಂದ ಅಧಿಕಾರಿಗಳು ಒಂದು ಕುಟುಂಬದ ಕುಮ್ಮುಕ್ಕಿನಿಂದ ಸರಿಯಾಗಿ ಅಳತೆ ಮಾಡದೆ ವ್ಯತ್ಯಾಸ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಈ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗಿತ್ತು.
ಗ್ರಾಮಾಸ್ಥರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳು, ಕಬ್ಬೂರು ಗ್ರಾಮದ ಗೋಮಾಳ ಜಮೀನು ಮತ್ತು ಕರೆಯನ್ನು ಅಳತೆ ಮಾಡಿ ಹದ್ದುಬಸ್ತು ಮಾಡಲು, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಆದೇಶ ನೀಡಿದ್ದರು. ಕಳೆದ ಮಾ.೫ರಂದು ಬುಧವಾರ ಭೂ ಮಾಪಕರು ಭೂಮಾಪನಕ್ಕೆ ಬೇಕಾದ ಗೋಮಾಳದ ಆಕಾರ (ನೀಲಿ ನಕ್ಷೆ) ಚೆಕ್ಕುಬಂದಿ, ಟಿಪ್ಪಣಿ, ಸುತ್ತಮುತ್ತಲಿನ ಪಹಣಿ, ಇತರೆ ಸಾಮಾಗ್ರಿಗಳಿಲ್ಲದೆ ಭಾಗಶಃ ಅಳತೆ ಮಾಡುವ ಸಂದರ್ಭದಲ್ಲಿ ಅಳತೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಡೆದರು.
ವಸ್ತುಸ್ಥಿತಿ ಅಳತೆ ಮಾಡಲು ಒತ್ತಾಯಿಸಿದರೂ ಭೂಮಾಪಕರು ಮಾಡಲಿಲ್ಲ. ಸರಿಯಾಗಿ ಮಾಡಬೇಕೆಂದು ಪಟ್ಟು ಹಿಡಿದರೂ ಭೂಮಾಪಕರು, ಗ್ರಾಮಸ್ಥರು ಅಳತೆ ಮಾಡಲು ಸಹಕಾರ ನೀಡಿಲಿಲ್ಲ ಎಂದು ಕುಂಟು ನೇಪವೊಡ್ಡಿ ಸದರಿ ಸ್ಥಳದಿಂದ ಹಿಂದಿರುಗಿ ಬಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
Political analysis | ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು?
ಪ್ರಾಮಾಣಿಕವಾಗಿ ಇರುವ ಭೂಮಾಪಕರನ್ನು ಅಳತೆ ಮಾಡಲು ಕಳುಹಿಸಬೇಕು. ಆಧುನಿಕ (ಡಿಜಿಟಿಲ್) ಉಪಕರಣಗಳಿಂದ ಸರ್ಕಾರಿ ಗೋಮಾಳ ಮತ್ತು ಕೆರೆಯನ್ನು ಅಳತೆ ಮಾಡಬೇಕು, ಗೋಮಾಳದ ಆಕಾರ, ಚೆಕ್ಕುಬಂದಿ, ಟಿಪ್ಪಣಿ, ಸುತ್ತಮುತ್ತಲಿನ ಪಹಣಿಯೊಂದಿಗೆ ಅಳತೆ ಮಾಡಿ, ಹದ್ದುಬಸ್ತು ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮತ್ತು ತಹಸೀಲ್ದಾರ್ ಡಾ.ಅಶ್ವತ್ಥ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಂದುವಾಡ, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಗ್ರಾಮಸ್ಥರಾದ ಮಂಜುನಾಥ ವೈ.ಕಬ್ಬೂರು, ಚಂದ್ರಪ್ಪ, ಎನ್.ಎಂ.ಕೊಟ್ಯಪ್ಪ, ಕೆ.ಪಿ.ರಾಮಸ್ವಾಮಿ, ಧರ್ಮಣ್ಣ, ಪ್ರಸನ್ನ, ರಾಮಸ್ವಾಮಿ ಎಲ್.ಪಿ., ಎನ್.ಶಿವಕುಮಾರ್, ದೇವರಾಜ್, ಎನ್.ಎಂ.ಕೋಟಿ, ಬಸವರಾಜ್ ಗೋಶಾಲೆ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಸರ್ಕಾರಿ ಗೋಮಾಳ ಮತ್ತು ಕೆರೆಯನ್ನು ಅಳತೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತ್ ಮಾಡಿಸಲು ತಹಸೀಲ್ದಾರ್, ಭೂಮಾಪನ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಂತರ ಯಾರು ಸಮಾಧಿ, ಸಶ್ಮಾನ ವಿರೂಪ, ಅಕ್ರಮವಾಗಿ ಮಣ್ಣು ಸಾಗಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ.