ದಾವಣಗೆರೆ (Davanagere): ಸಾಹಿತ್ಯ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಾಹಿತಿ ಮತ್ತು ಪತ್ರಕರ್ತ ಪಾಪುಗುರು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಶ್ರೀ ದೇವರಾಜ್ ಅರಸ್ ವಿದ್ಯಾಸಂಸ್ಥೆ (ರಿ) ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಿಂದ ದಾವಣಗೆರೆ ತಾಲೂಕು ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರದ ವಿದ್ಯಾರ್ಥಿಗಳಿಗೆ “ಯುವ ಜನತೆಗೆ ಸಾಹಿತ್ಯದ ಅಗತ್ಯತೆ” ವಿಷಯ ಕುರಿತು ಉಪನ್ಯಾಸ ನೀಡಿದರು.
ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಿದರು ಸಹ ಅದು ಒಬ್ಬ ಲೇಖಕ ಬರೆದ ಪುಸ್ತಕ. ಆ ಪುಸ್ತಕ ಶಿಕ್ಷಣದ ರೂಪ ಪಡೆದು ನಿಮ್ಮ ಬಾಳಿಗೊಂದು ದಾರಿದೀಪ ಕಲ್ಪಿಸುತ್ತದೆ ಎಂದಾದರೆ ಅದು ಸಾಹಿತ್ಯದ ತಾಕತ್ತು. ಹಿಂದಿನ ಗುರುಕುಲದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಎಂಬ ಬೇರೆ ಬೇರೆ ವಿಭಾಗಗಳಿರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ವಿದ್ಯಾಮಾನಗಳು ಬೆಳೆದಂತೆ ಸಾಹಿತ್ಯ ಮತ್ತು ಶಿಕ್ಷಣ ಪ್ರತ್ಯೇಕ ರೂಪವನ್ನು ಪಡೆದುಕೊಂಡಿವೆ. ಸಾಹಿತ್ಯದ ಗುಣವೇ ಸಂಸ್ಕಾರವಂತರನ್ನಾಗಿ ಮಾಡುವುದು ಹಾಗಾಗಿ ಅದರ ಬಳಿಗೆ ನೀವು ಹೋಗಬೇಕು. ಇಂದಿನ ಯುವ ಜನತೆಯಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವುದಕ್ಕೆ ವಾಟ್ಸಾಪ್ ಸಾಹಿತ್ಯ ಕಾರಣ. ಅದನ್ನು ಬಿಟ್ಟು ಪುಸ್ತಕ ಸಾಹಿತ್ಯದ ಕಡೆಗೆ ವಾಲಿದರೆ ನಿಮ್ಮ ಮುಂದಿನ ಬದುಕು ಉಜ್ವಲವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
Read also : ಸಂವಿಧಾನ ಉಳಿಸಲು ಪಣ ತೊಡೋಣ : ಜಿಗ್ನೇಶ್ ಮೇವಾನಿ
ವಿಂಡೋಸ್ ಕಂಪ್ಯೂಟರ್ ಎಜುಕೇಶನ್ ಸೆಂಟರ್ ಮ್ಯಾನೇಜಿಂಗ್ ಡೈರೆಕ್ಟರ್ ಬಸವರಾಜ ಮಾತನಾಡಿ, ನಿಮ್ಮ ಓದಿಗೆ ಸರಿಯಾಗಿ ಕೆಲಸ ಸಿಗುವುದು ಕಷ್ಟ ಸಾಧ್ಯವಿದೆ ಹಾಗಾಗಿ ಓದಿನ ಜೊತೆಗೆ ವಿಶೇಷವಾದ ಕೌಶಲ್ಯವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಮೊಬೈಲ್ ನೊಂದಿಗೆ ಅತಿ ಹೆಚ್ಚು ಕಾಲ ಕಳೆದು ಜೀವನವನ್ನು ಹಾಳು ಮಾಡಿಕೊಳ್ಳುವುದರ ಬದಲಾಗಿ ಅದರಿಂದಲೇ ಬದುಕು ಕಟ್ಟಿಕೊಳ್ಳುವಂತ ಗಮನ ಹರಿಸಬೇಕು ಎಂದರು.
ವೇದಿಕೆಯ ಮೇಲೆ ಪ್ರಾಧ್ಯಾಪಕರಾದ ಮನೋಹರ್ ಎಸ್. ಬಿ, ನಾಗರಾಜು .ಜಿ, ಮೊಹಮ್ಮದ್ ರಿಯಾಜ್, ಬಸವರಾಜ್ ಡಮ್ಮಳ್ಳಿ, ಪ್ರವೀಣ್, ಮಧುಮಾಲತಿ, ಗೀತಾ ಪಾಟೀಲ್, ಹಾಗೂ ಕೋಡಿಹಳ್ಳಿ ಗ್ರಾಮದ ಮುಖಂಡ ಮಾನಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ ವಂದಿಸಿದರು.