ದಾವಣಗೆರೆ (Davanagere): ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ನಂತರ ಉಂಟಾದ ಗೊಂದಲ ಕುರಿತು ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮತ್ತು ಜಯಮೃತ್ಯುಂಜಯ ಶ್ರೀಗಳು ಕರೆದಿದ್ದ ತಮ್ಮ ಬೆಂಬಲಿಗರ ಪ್ರತ್ಯೇಕ ಸಭೆಗಳು ರದ್ದಾಗಿವೆ ಎಂದು ಮಾಜಿ ಶಾಸಕ ಹಾಗೂ ಸಮಾಜದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶಿವಶಂಕರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜದ ನಾಯಕರಿಗೆ ಅನ್ಯಾಯವಾದಾಗ ಸಮಾಜ ಬಾಂಧವರು ಹೋರಾಟ ಮಾಡುವುದು ಸಾಮಾನ್ಯ, ಆದರ ಬಗ್ಗೆ ಹೆಚ್ಚು ಹೇಳುವುದಿಲ್ಲ. ಆದರೆ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಸಮಾಜದ ಒಬ್ಬ ನಾಯಕನಿಗೆ ಅನ್ಯಾಯವಾಗುತ್ತದೆ ಎಂದು ಬೆಂಬಲಕ್ಕೆ ನಿಂತಿದ್ದು ಸ್ವಾಗತಾರ್ಹ. ರಾಜಕೀಯ ನಾಯಕರಿಗೆ ಎಲ್ಲ ಮಠ ಪೀಠಗಳು ಬೆಂಬಲಕ್ಕೆ ನಿಲ್ಲುವುದು ಸಾಮಾನ್ಯ. ಸ್ವಾಮೀಜಿಯಾದವರು ಪೀಠ ಕಟ್ಟುವುದು, ಸಮಾಜ ಕಟ್ಟುವುದು, ಸಮಾಜ ಬಾಂಧವರಿಗೆ ನೋವಾದಾಗ ಬೆಂಬಲಕ್ಕೆ ನಿಲ್ಲುವುದು ಸಾಮಾನ್ಯ. ಜಯಮೃತ್ಯುಂಜಯ ಸ್ವಾಮೀಜಿ ಇದನ್ನೆ ಮಾಡಿದ್ದಾರೆ ಎಂದರು.
ತದನಂತರ ನಡೆದ ಹೇಳಿಕೆಗಳು, ಅದಕ್ಕೆ ಪ್ರತಿ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳ ಸಂದೇಶಗಳಿಂದ ಸಾಕಷ್ಟು ಗೊಂದಲಗಳು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿವೆ. ಇದು ಮುಂದುವರಿಯಬಾರದು ಎಂಬ ಸದುದ್ದೇಶದಿಂದ ಸಮಾಜದ ಮುಖಂಡ, ಮಾಜಿ ಸಚಿವ ಎ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಒಂದೇ ವೇದಿಕೆಯಲ್ಲಿ ಸಭೆ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸ್ವಾಮೀಜಿ ಮತ್ತು ವಿಜಯಾನಂದ ಕಾಶಪ್ಪನವರ್ ಅವರೊಂದಿಗೆ ಸಭೆಗಳ ರದ್ಧುಪಡಿಸುವಂತೆ ಮನವಿ ಮಾಡಲಾಗಿತ್ತು. ಇಬ್ಬರು ಸಹಮತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕಾಶಪ್ಪನವರ್ ಕರೆದಿದ್ದ ಏ.19 ಸಭೆ ಹಾಗೂ ಇದಕ್ಕೆ ಪ್ರತಿಯಾಗಿ ಏ. 20 ರಂದು ಸ್ವಾಮೀಜಿಯವರು ಕರೆದಿದ್ದ ಅವರವರ ಬೆಂಬಲಿಗರ ಎರಡೂ ಸಭೆಗಳನ್ನು ರದ್ದು ಮಾಡಲಾಗಿದ್ದು, ಸಮಾಜ ಬಾಂಧವರು ಈ ಬಗ್ಗೆ ಗಮನಹರಿಸಬೇಕೆಂದು ತಿಳಿಸಿದರು.
Read also : ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ : ಅಧಿಕಾರಿಗಳಿಗೆ ತರಾಟೆ
ಶ್ರೀಗಳು ಯತ್ನಾಳ್ ಅವರ ಬಗ್ಗೆ ಹೆಚ್ಚು ಹೇಳಿಕೆ ಕೊಟ್ಟಿದ್ದರಿಂದ ಸಮಾಜದ ಕಾಂಗ್ರೆಸ್ ಪಕ್ಷದ ಕೆಲ ನಾಯಕರಿಗೆ ಗೊಂದಲ ಮತ್ತು ಅಸಮಾಧಾನ ಆಗಿದೆ. ಇದರಿಂದ ನಾಯಕರು ಆತಂಕಪಡುವುದು ಬೇಡ. ಸ್ವಾಮೀಜಿಯವರು ಅವರ ಜವಾಬ್ದಾರಿ ನಿರ್ವಹಿಸಿದ್ದಾರೆ. ಅದನ್ನು ತಪ್ಪಾಗಿ ಅರ್ಥೈಸಿ ಶ್ರೀಗಳ ಮೇಲೆ ಹರಿಹಾಯುವುದುಬೇಡ. ಶ್ರೀಗಳು ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಅವರು ಕೇವಲ ಮಠ ಕಟ್ಟಿಲ್ಲ, ಮನಸು ಕಟ್ಟಿದ್ದಾರೆ. ಸಮಾಜ ಕಟ್ಟುವಲ್ಲಿ ಅವರ ಪಾತ್ರ ದೊಡ್ಡದಿದೆ. ಸ್ವಾಮೀಜಿ ಒಂದು ಪಕ್ಷದ ಪರವಾಗಿ ಇದ್ದಾರೆ ಎಂದು ತಿಳಿದುಕೊಳ್ಳುವುದು ಬೇಡ. ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಬೇಕು. ಸಮಾಜ ದೊಡ್ಡದೇ ಹೊರತು, ವ್ಯಕ್ತಿ ಅಲ್ಲ. ಯಾರೂ ಕೂಡ ದ್ವೇಷದ ಹೇಳಿಕೆಗಳನ್ನು ನೀಡಬಾರದು ಎಂದರು.
ಮುರುಗೇಶ್ ನಿರಾಣಿ ಒಂದು ಕಡೆ, ಯತ್ನಾಳ್ ಇನೊಂದು ಕಡೆ, ಕಾಶಪ್ಪನವರ್ ಮತ್ತೊಂದು ಕಡೆ ಇದ್ದಾರೆ. ಎಲ್ಲರನ್ನೂ ಒಗ್ಗೂಡಿಸಿ ಒಂದೇ ವೇದಿಕೆಯಲ್ಲಿ ತಂದು ಸಭೆ ನಡೆಸುವ ನಿಟ್ಟಿನಲ್ಲಿ ಮಾಜಿ ಸಚಿವ ಎ.ಬಿ. ಪಾಟೀಲ್, ನಾನು ಒಳಗೊಂಡಂತೆ ಅನೇಕರು ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಭೆಯ ದಿನ ನಿರ್ಧರಿಸಲಾಗುವುದು. ಅಲ್ಲಿಯವರೆಗೂ ಸಮಾಜ ಬಾಂಧವರು ತಾಳ್ಮೆಯಿಂದ ಇರಬೇಕೆಂದು ಶಿವಶಂಕರ್ ಮನವಿ ಮಾಡಿದರು.
ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದ ಕಾರಣಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಪರ ನಿಂತಿದ್ದು ಕರ್ತವ್ಯದ ಒಂದು ಭಾಗ. ಸಮಾಜದ ಯಾವುದೇ ನಾಯಕರಿಗೆ ಅನ್ಯಾಯವಾದಲ್ಲಿ ಅವರ ಪರವಾಗಿ ನಿಲ್ಲಬೇಕಾಗಿರುವುದು ಸರ್ವೇ ಸಾಮಾನ್ಯ. ಅದರಂತೆ ಯತ್ನಾಳ್ ಪರ ನಿಂತಿದ್ದಾರೆ. ಅದನ್ನ ಕೆಲವರು ಒಪ್ಪಿದ್ದಾರೆ. ಕೆಲವರು ಸ್ವಾಮೀಜಿ ಒಬ್ಬರು, ಒಂದು ಪಕ್ಷದ ಪರ ನಿಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದು ಸಮಂಜಸವೂ ಆಗಿದೆ. ಸ್ವಾಮೀಜಿಯವರು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ ಎಂದು ಎಲ್ಲರೂ ತಿಳಿದು, ಪರಸ್ಪರ ಹೇಳಿಕೆಗಳನ್ನು ನೀಡುವುದು, ಫೇಸ್ಬುಕ್ನಲ್ಲಿ ಕಾಮೆಂಟ್ ಹಾಕುವುದನ್ನ ಸಮಾಜದ ಹಿತದೃಷ್ಟಿಯಿಂದ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಒಬ್ಬರ ಮತ್ತು ಒಂದು ಪಕ್ಷದ ಪರವಾಗಿ ನಿಲ್ಲದಂತೆ ಸ್ವಾಮೀಜಿಯವರಿಗೂ ಕೋರಲಾಗಿದೆ. ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಅವರು ಹಣ ಮಾಡುವತ್ತ ಹೆಜ್ಜೆ ಹಾಕಿಲ್ಲ. ಬದಲಿಗೆ ಸಮಾಜದವರ ಮನಸ್ಸುಗಳ ಕಟ್ಟುವ ಕೆಲಸ ಮಾಡಿದ್ದಾರೆ. ನಾವು ಪಂಚಮಸಾಲಿಗಳು ಎಂದು ಎದೆತಟ್ಟಿಕೊಂಡು ಹೇಳಿಕೊಳ್ಳುವಂತಹ ಸನ್ನಿ ವೇಶ ತಂದಿದ್ದಾರೆ. ಸಮಾಜದಲ್ಲಿ ಗೊಂದಲ, ಗೋಜಲು, ಆತಂಕ ಮೂಡಿಸುವ, ದ್ವೇಷ ಮೂಡಿಸುವ ಹೇಳಿಕೆ ನೀಡಬಾರದು. ಎಲ್ಲ ಗೊಂದಲಕ್ಕೆ ಇತಿಶ್ರೀ ಆಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಬಿ.ಜಿ. ಅಜಯ್ಕುಮಾರ್, ಬಿ.ಜಿ. ಭರತ್, ಮುರುಗೇಶ್, ಮಯೂರ್, ಆನಂದ ಜಿರಲಿ ಇತರರು ಇದ್ದರು.