ಮೈಸೂರು ನಿವಾಸಿ ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯ (ವಿದ್ವಾನ್ ಪುಟ್ಟಣ್ಣಯ್ಯ ) ಅವರ ಹುಟ್ಟೂರು ಹಾಸನ ಜಿಲ್ಲೆ ಅರಸೀಕೆರೆ ಬಳಿಯ ಯರಿಗೇನಹಳ್ಳಿ. ಮುದ್ದಪ್ಪ ಮತ್ತು ಲಕ್ಷ್ಮಮ್ಮ ಅಪ್ಪ ಅಮ್ಮ. ಇವರ ತಾತ ಸಿದ್ದಪ್ಪ, ಮೂಡಲಪಾಯ ಯಕ್ಷಗಾನದ ಭಾಗವತರು. ಬಾಲ್ಯದಲ್ಲೇ ಇನಿತು ರಂಗಸಂಸ್ಕೃತಿಯ ದಿವಿನಾದ ಒಡನಾಟ. ವೇಣು ವಿದ್ವಾನ್ ಶ್ರೀ ಸೋಮಶೇಖರಪ್ಪ ಅವರ ವಾಂಛಲ್ಯಭರಿತ ಶಿಷ್ಯತ್ವ.
ದಕ್ಷಿಣಾದಿ ಸಂಗೀತದ ಪ್ರೌಢಿಮೆ. ಲೀಲಾಜಾಲ ಮಾತ್ರವಲ್ಲ , ಲಾಲಿತ್ಯಮಯವಾಗಿ ಹಾರ್ಮೋನಿಯಂ ನುಡಿಸುವ ನೈಪುಣ್ಯ ಸಂಪನ್ನತೆ. ಗುಬ್ಬಿ ವೀರಣ್ಣ ನಾಟಕ ಕಂಪನಿಯಂತೂ ಪುಟ್ಟಣ್ಣಯ್ಯ ಅವರ ಮಧುರ ಕಂಠಕೆ ಮತ್ತು ಹಾರ್ಮೋನಿಯಂ ನುಡಿಸುವ ಸಲಿಲತೆಗೆ ಉತ್ಕೃಷ್ಟತೆಯ ಮೆರುಗು ನೀಡಿತು.
ಮೈಸೂರು ರಂಗಾಯಣಕ್ಕೆ ಸದಾರಮೆ, ಮಂಡ್ಯ ರಮೇಶ ‘ನಟನ’ ತಂಡಕ್ಕೆ ಸುಭದ್ರಾ ಕಲ್ಯಾಣ ಸೇರಿದಂತೆ ಸುರುಚಿ ರಂಗಮನೆ, ಕದಂಬ ರಂಗವೇದಿಕೆಗಳಿಗೆ ಮನ್ಮಥ ವಿಜಯ, ಕುರುಕ್ಷೇತ್ರ ಮುಂತಾದ ನಾಟಕಗಳ ರಂಗಸಂಗೀತ, ವಿನ್ಯಾಸ, ನಿರ್ದೇಶನದ ಮಹಾಮಣಿಹ ಪ್ರಾಪ್ತಿ. ವಾಲ್ಮೀಕಿ ವಿರಚಿತ “ಶ್ರೀಮದ್ ರಾಮಾಯಣ” ಎಂಬ ಸಂಗೀತ ಸಾದೃಶ್ಯ ಮಹಾಕಾವ್ಯವನ್ನು ಇತ್ತೀಚೆಗೆ ರಂಗಪ್ರಯೋಗಕ್ಕಿಳಿಸಿ ಯಶಸ್ಸು ಗಳಿಸಿದ್ದಾರೆ.
ಅಂದಹಾಗೆ ಪುಟ್ಟಣ್ಣಯ್ಯನವರ ಸಿರಿಕಂಠದ ಸುಮಧುರ ಸರೋವರದಲ್ಲಿ 2783 ರಂಗಗೀತೆಗಳು ಮಾಧುರ್ಯಗೊಂಡಿವೆ. ಹೀಗೆ ಚೈತನ್ಯಶೀಲ ವೃತ್ತಿ ರಂಗಭೂಮಿಯ ಹಲವು ಅನನ್ಯತೆಗಳನ್ನು ಬದುಕಿದವರು. ಇಷ್ಟೆಲ್ಲಾ ಪಾಂಡಿತ್ಯದ ಆಡುಂಬೊಲವೇ ಆಗಿರುವ ಪುಟ್ಟಣ್ಣಯ್ಯ ಅವರ ವಿದ್ವಜ್ಜನ ವಿಧೇಯಭಾವ ಸಜ್ಜನಿಕೆಗೆ ಶರಣು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ಎಂಬತ್ತರ ಅಂಚಿನ ಏರುಪ್ರಾಯದ ಪುಟ್ಟಣ್ಣಯ್ಯನವರು ಕನ್ನಡ ರಂಗಸಂಗೀತದ ಸವ್ಯಸಾಚಿಯೇ ಹೌದು. ಇದೇ ಮಾರ್ಚ್ 27 ರಂದು ಸಂಜೆ, ದಾವಣಗೆರೆ ರಂಗಾಯಣದ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆ. ಶಿವಯೋಗಿ ಮಂದಿರದ ಆವರಣದಲ್ಲಿ ದಾವಣಗೆರೆ ಸಹೃದಯರಿಗೆ ಅವರ ಸ್ವರ ಸಾರಥ್ಯದ ‘ರಂಗ ಗೀತಾಂಜಲಿ’ ತಂಡ ಉಣಬಡಿಸುವ ರಂಗಸಂಗೀತದ ರಸದೌತಣ. ಬನ್ನಿ, ಪರಿಶುಭ್ರ ರಂಗಸಂಗೀತ ಸಾಗರದಲಿ ಮುಳುಗೇಳೋಣ.
ಮಲ್ಲಿಕಾರ್ಜುನ ಕಡಕೋಳ