ದಾವಣಗೆರೆ: ಸಮಾಜದ ಹಿತಕ್ಕಾಗಿ ಸಂಘಟನೆ ಅತ್ಯಗತ್ಯ, ಏಕೆಂದರೆ ಅದು ಸಮ ಸಮಾಜ ನಿರ್ಮಾಣ, ಆರ್ಥಿಕ ಸಬಲೀಕರಣ, ಅಭಿವೃದ್ಧಿ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗುತ್ತದೆ. ಸಂಘಟನೆಯಿಂದ ಸಮುದಾಯ ತಮ್ಮ ಹಕ್ಕುಗಳನ್ನು ಪಡೆಯಲು ಶಕ್ತಿಯನ್ನು ನೀಡುತ್ತದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಕರೆ ನೀಡಿದರು.
ನಗರದ ಪಿ.ಬಿ.ರಸ್ತೆಯ ಹೋಟೆಲ್ ಓಷನ್ ಪಾರ್ಕ್ನ ಆನೆಕೊಂಡ ಹನುಮಂತಪ್ಪ ಕನ್ವೆನ್ಷನ್ ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಎಲ್ಐಸಿ ನೌಕರರ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನತೆ ಮತ್ತು ನ್ಯಾಯ ಆಧಾರಿತ ಸಮಾಜವನ್ನು ರೂಪಿಸಲು ಸಂಘಟಿತ ಹೋರಾಟ ಮುಖ್ಯ. ಸಮಾಜವನ್ನು ಆರ್ಥಿಕವಾಗಿ ಸದೃಢಗೊಳಿಸಲು, ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಸಂಘಟನೆ ಸಹಕಾರಿ. ಈ ನಿಟ್ಟಿನಲ್ಲಿ ಎಲ್ಐಸಿ ನೌಕರರು ಸಂಘ ಸ್ಥಾಪಿಸುವ ಮೂಲಕ ಸಂಘಟಿತರಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ದಾವಣಗೆರೆಯಲ್ಲಿ ಆರಂಭವಾಗಿರುವ ನಿಮ್ಮ ಸಂಘಟನೆ ಕೇವಲ ದಾವಣಗೆರೆಗೆ ಸೀಮಿತವಾಗದೆ ರಾಜ್ಯಾದ್ಯಂತ ಸಂಘಟನೆ ಆಗಬೇಕು. ಇಲ್ಲಿಂದಲೇ ನಿರ್ಣಯ ತೆಗೆದುಕೊಂಡು ರಾಜ್ಯದ ೩೦ ಜಿಲ್ಲೆಗಳಲ್ಲಿ ಸಭೆ, ಸಮಾರಂಭಗಳನ್ಬು ಅಯೋಜಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ಸಂಘಟನೆಯನ್ನು ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನಿವೃತ್ತ ಪ್ರಾಂಶುಪಾಲ ಡಾ.ಎಂ.ಮಂಜಣ್ಣ ಮಾತನಾಡಿ, ಯಾವುದೇ ಸಂಘಟನೆ ನೊಂದವರಿಗೆ ದನಿಯಾಗಬೇಕು. ಸಂಘಟನೆ ಜೊತೆಗೆ ಮಕ್ಕಳಲ್ಲಿ ಜವಾಬ್ದಾರಿಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು.
Read also : ಶಿಷ್ಯವೇತನಕ್ಕೆ ಅರ್ಜಿಆಹ್ವಾನ:ಅವಧಿ ವಿಸ್ತರಣೆ
ನಟ, ನಿರ್ದೇಶಕ ಮತ್ತು ನಿರ್ಮಾಪಕ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ, ಯೋಚನೆ ಮತ್ತು ಉದ್ದೇಶಗಳು ಸರಿಯಾಗಿದ್ದರೆ, ಯಾವುದೇ ಒಂದು ವೇದಿಕೆ ಅತ್ಯಲ್ಪ ಕಾಲದಲ್ಲಿ ಅತ್ಯುತ್ತಮ ಸ್ಥಾನ ಗಳಿಸುತ್ತದೆ ಎಂಬುದಕ್ಕೆ ಈ ಸಂಘಟನೆ ಉದಾಹರಣೆಯಾಗಿದೆ. ಸಂಘಟನೆ ಮತ್ತು ಒಗ್ಗಟ್ಟು ಇಲ್ಲದಿದ್ದರೆ ಯಾವುದೇ ಸಮಾಜ ಮತ್ತು ಪುಣ್ಯ ಪುರಷರು ಇತಿಹಾಸದಲ್ಲಿ ಮಣ್ಣಾಗಿ ಹೋಗುತ್ತಾರೆ. ಪಾಳೆಗಾರರ ಆಳ್ವಿಕೆ ಕುರಿತ ಐತಿಹಾಸಿಕ ವಿಚಾರಗಳನ್ನು ತಿಳಿಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಟಿ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಶಂಭು ನಾಯಕ, ಶ್ರೀನಿವಾಸ, ಶಿವಣ್ಣ, ವೆಂಕಟೇಶ್ ಎನ್.ಪೂಜಾರ್, ನಂದೀಶ್ ವಿ.ಬ್ಯಾಡಗಿ, ದಿವಾಕರ, ಸರಸ್ವತಿ, ಡಿ.ಬೊಮ್ಮಾಯಿ, ವೆಂಕಪ್ಪ ನಾಯಕ, ದೊರೆಸ್ವಾಮಿ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಲ್ಐಸಿ ದಾವಣಗೆರೆ-೨ ಕಚೇರಿಯ ಅಭಿವೃದ್ಧಿ ಅಧಿಕಾರಿ ಸಿ.ರವಿ ಸೇರಿದಂತೆ ರಾಜ್ಯದಿಂದ ಆಗಮಿಸಿದ್ದ ವಿವಿಧ ಜಿಲ್ಲೆಗಳ ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಆರ್.ಗೌತಮಿ ಪ್ರಾರ್ಥಿಸಿದರು.
‘ಯಾವುದೇ ಸಮಾಜದ ಪ್ರಗತಿ ಮತ್ತು ಅಭಿವೃದ್ಧಿಗೆ ಸಂಘಟನೆ ಒಂದು ಮೂಲಾಧಾರ.ಸಂಘಟನೆಯಿಂದ ಸಮಾಜ ಬೆಳೆಯುತ್ತದೆ. ವ್ಯಕ್ತಿಗಳು ಹಾಗೂ ಇಲಾಖೆಗಳ ಪರಿಚಯ, ಸರ್ಕಾರದ ಯೋಜನೆಗಳು, ಸಮಾಜದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು, ಬೆಳವಣಿಗೆ ಮೊದಲಾದವುಗಳನ್ನು ಹಂಚಿಕೊಳ್ಳಬಹುದು. ಸಂಘಟನೆ ಸಮಾಜದ ಶಕ್ತಿಯಾಗಿರುತ್ತದೆ’.-ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ, ಜಗದ್ಗುರು, ವಾಲ್ಮೀಕಿ ಗುರುಪೀಠ.
