ದಾವಣಗೆರೆ (Davanagere): ದಿವ್ಯಾಂಗರಿಗೆ ಅಗತ್ಯ ಅನುಕೂಲಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ‘ಸಕ್ಷಮ’ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಆರ್ಎಸ್ಎಸ್ನ ಅಂಗ ಶಾಖೆ ಸಕ್ಷಮದ ಕರ್ನಾಟಕ ದಕ್ಷಿಣ ಪ್ರಾಂತ ಶಾಖೆ ಅಧ್ಯಕ್ಷ ಕೇಶವ್ ಕುಮಾರ್ ಹೇಳಿದರು.
ಭಾನುವಾರ ನಗರದ ಹಿಮೋಫಿಲಿಯಾ ಸೊಸೈಟಿ ಸಭಾಂಗಣದಲ್ಲಿ ಸಕ್ಷಮ ಸಂಸ್ಥಾಪನಾ ಹಾಗೂ ರಕ್ತದಾನಿಗಳ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಕ್ಷಮ ದಿವ್ಯಾಂಗರ ಕಲ್ಯಾಣಕ್ಕಾಗಿ ಆರಂಭಗೊಂಡ ಶಾಖೆಯಾಗಿದ್ದು, ಇದರ ಮೂಲಕ ಅಗತ್ಯ ಇರುವವರಿಗೆ ಸಾಧನ ಸಲಕರಣೆ, ವಿದ್ಯಾಭ್ಯಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾಬಂದಿದೆ ಎಂದರು.
ದೇಶದಲ್ಲಿಂದು ಅಂದಾಜು 5 ಕೋಟಿ ದಿವ್ಯಾಂಗರು ಇದ್ದು, 21 ಬಗೆಯ ಅಂಗ ವೈಕಲ್ಯತೆಯನ್ನು ಸರ್ಕಾರ ಗುರುತಿಸಿದೆ. ಒಂದು ಕುಟುಂಬದಲ್ಲಿ ಓರ್ವ ದಿವ್ಯಾಂಗ ಇದ್ದರೆ ಅದು ಇಡೀ ಕುಟುಂಬದ ಪರಿಣಾಮ ಬೀರುತ್ತದೆ. ಇನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ದಿವ್ಯಾಂಗರು ಕಂಡುಬಂದರೆ ಅವರ ಪರಿಸ್ಥಿತಿ ಇನ್ನೂ ಶೋಚನೀಯವಾಗಿರುತ್ತದೆ. ಇದರ ಗಂಭೀರತೆಯನ್ನು ಅರಿತು ಸಕ್ಷಮ ದೇಶದ ಎಲ್ಲ ರಾಜ್ಯ, ಪ್ರಾಂತಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿ ಆ ಮೂಲಕ ದಿವ್ಯಾಂಗರಿಗೆ ಅಗತ್ಯ ಸೇವೆಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
Read also : ಆದಾಯವಿಲ್ಲ. ಆಹಾರವಿಲ್ಲ, ಭವಿಷ್ಯವಿಲ್ಲ: ದಾವಣಗೆರೆಯಿಂದ ಬೈಕ್ ಟ್ಯಾಕ್ಸಿ ರೈಡರ್ ಗಳು ಸರ್ಕಾರದ ಬೆಂಬಲಕ್ಕಾಗಿ ವಿಧಾನಸೌಧಕ್ಕೆ
ಶ್ರೀಲಂಕಾ ದೇಶದಲ್ಲಿ ಕಣ್ಣನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಣೆ ಮಾಡಲಾಗಿದ್ದು, ಇದೇ ಮಾದರಿಯಲ್ಲಿ ಭಾರತದಲ್ಲೂ ಕಣ್ಣನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಣೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಮೂಲಕ ಸತ್ತ ಮೇಲೆ ಮಣ್ಣಲ್ಲಿ ಮಣ್ಣಾಗಿ ಹೋಗುವ ಕಣ್ಣುಗಳು ಬದುಕಿರುವ ಅಂಧರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲಿ ಎನ್ನುವುದು ಸಕ್ಷಮದ ಆಶಯವಾಗಿದೆ ಎಂದರು
ಕಾರ್ಯಕ್ರಮ ಉದ್ಘಾಟಿಸಿದ ಜಲತಜ್ಞ ಜಯಚಂದ್ ಜೈನ್ ಮಾತನಾಡಿ, ರಕ್ತದಾನ ಮತ್ತು ದೇಹ ದಾನದ ಬಗ್ಗೆ ಜನ ಸಾಮಾನ್ಯರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿದ್ದು, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿಯ ಅಗತ್ಯವಿದೆ. ಆರೋಗ್ಯವಂತ ಮನುಷ್ಯನ ದೇಹದಿಂದ 1 ಯುನಿಟ್ ರಕ್ತ ತೆಗೆದರೆ ಯಾವುದೇ ತೊಂದರೆ ಆಗುವುದಿಲ್ಲ. ಇನ್ನು ಕುಸುಮ ರೋಗದ ಬಗ್ಗೆ ಡಾ.ಸುರೇಶ್ ಹನಗವಾಡಿ ಅವರು ರಾಷ್ಟ್ರಮಟ್ಟದಲ್ಲಿ ಕೈಗೊಂಡಿರುವ ಸೇವೆ ಶ್ಲಾಘನೀಯವಾದುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇ.ಎನ್.ಟಿ ತಜ್ಞ ಡಾ.ಶಿವಕುಮಾರ ಮಾತನಾಡಿ,ದಿವ್ಯಾಂಗರು ಇಂದು ಸಾಕಷ್ಟು ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಐಎಎಸ್ ಅಧಿಕಾರಿಗಳು, ಕ್ರೀಡಾಪಟುಗಳು ಆಗಿ ಹೊರಹೊಮ್ಮಿದ್ದಾರೆ. ತಮ್ಮ ಅಂಗವಿಕಲ ಮಗುವಿನಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪೋಷಕರು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಸಕ್ಷಮ-ದಾವಣಗೆರೆ ಶಾಖೆ ಅಧ್ಯಕ್ಷ ಬಿ.ಜಿ.ಮನೋಹರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪೊಲೀಸ್ ಅಧಕಾರಿ ಕೆ.ರವಿನಾರಾಯಣ, ದಾವಣಗೆರೆ ಸಹಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಸಕ್ಷಮ ಗೀತೆ ವಾಚಿಸಿದರು. ಮಹಾಪೋಷಕ ಶಂಭುಲಿಂಗಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಾ ಅವಿನಾಶ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಗುರು ಬಸವರಾಜ ಸ್ವಾಗತಿಸಿದರು. ಅಮರೇಶ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಜಯದೇವಯ್ಯ ವಂದನಾರ್ಪಣೆ ಮಾಡಿದರು. ಇದೇ ವೇಳೆ ವಿಶೇಷಚೇತನರಿಗೆ ವ್ಹೀಲ್ ಚೇರ್, ಶಾಲಾ ಬ್ಯಾಗ್ ಸೇರಿದಂತೆ ಸಾಧನ ಸಲಕರಣೆ ವಿತರಿಸಲಾಯಿತು.