ಸೊಂಡೂರಿನ 94,359 ಹೆಕ್ಟೇರುಗಳ ಭೌಗೋಳಿಕ ಕ್ಷೇತ್ರದ ಪೈಕಿ ,ಸಾಗುವಳಿ ಮಾಡುವ ಭೂಮಿ 34,290 ಹೆಕ್ಟೇರುಗಳು ಮಾತ್ರ. ಅದರಲ್ಲಿಯೂ ಮಳೆಯಾಧಾರಿತ ಕೃಷಿ ಸಾಗುವಳಿ ಭೂಮಿ 28290 ಹೆಕ್ಟೇರು ಆಗಿದ್ದು, ಉಳಿದದ್ದು ಅಲ್ಪಸ್ವಲ್ಪ ದ ನೀರಾವರಿ ಸಾಗುವಳಿ ಭೂಮಿಯಾಗಿದೆ.ಇದ್ದ 24 ಕೆರೆಗಳಲ್ಲಿ ಹೂಳು ತುಂಬಿದೆ.
ಭೂಮಿಗಳೆಲ್ಲಾ ಬಹುತೇಕ ಮಳೆಯಾಶ್ರಿತವೇ
ಸಣ್ಣ ರೈತರ ತುಂಡು ಭೂಮಿಗಳೆಲ್ಲಾ ಬಹುತೇಕ ಮಳೆಯಾಶ್ರಿತವೇ. ಇಲ್ಲಿ ವಾಣಿಜ್ಯ ಬೆಳೆಗಳಿಗಿಂತಲೂ ತಮ್ಮ ಹೊಟ್ಟೆಗೆ ಅಗತ್ಯವಾದ ಜ್ವಾಳ ,ಸಜ್ಜಿ, ನವಣೆ, ಹುಳ್ಳಿ ಬೆಳೆಗಳನ್ನು ಬೆಳೆದು ಉಳಿದ ದಿನಸಿಗೂ,ಬಟ್ಟೆ ಬರೆಗೂ ಅವೇ ಬೆಳೆದ ಧಾನ್ಯಗಳನ್ನು ಆಗಾಗ ಅಂಗಡಿಗಳಿಗೆ ಹಾಕಿ ,ಅದೇ ರೊಕ್ಕದಲ್ಲಿ ಎಣ್ಣೆ,ಚಾಪುಡಿ,ಸಕ್ರೆ,ಬೆಲ್ಲ ಮುಂತಾದ ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಾರೆ.
ಉಣ್ಣುವ ಜ್ವಾಳಕ್ಕೂ ಪಡಿಪಾಟಲು

ಎಷ್ಟೋ ಕುಟುಂಬಗಳು ತಾವು ಬೆಳೆದ ಧಾನ್ಯಗಳನ್ನೆಲ್ಲ ಮಕ್ಕಳ ಮದುವೆಗೆಂದು ಮಾರಿ ,ಬಂದ ಹಣವೆಲ್ಲ ಖರ್ಚಾದ ನಂತರ ಉಣ್ಣುವ ಜ್ವಾಳಕ್ಕೂ ಪಡಿಪಾಟಲುಮಾಡಿಕೊಂಡಿದ್ದೂ ಇದೆ. ಇಲ್ಲಿನ ಕೃಷಿಕರ ದೇಹಗಳೂ ಅಷ್ಟೆ.ಕಬ್ಬಿಣದ ತೆಳು ರಾಡುಗಳಂತಿರುವ ಕಪ್ಪು ಕೈ-ಕಾಲುಗಳಲ್ಲಿ ಅದೇನು ಶಕ್ತಿಯಿರುತ್ತೋ ಏನೋ…! ಮತ್ತೆ ಉಣ್ಣುವ ಆಹಾರವೋ ತುಂಬಾ ಸರಳ. ಮುಂಜಾನೆ ರೊಟ್ಟಿಯ ಮೇಲೊಂದಿಷ್ಟು ತಂಬುಳಿ: ಮಧ್ಯಾಹ್ನಕ್ಕೊ ಮುದ್ದೆಯ ಮೇಲೊಂದಿಷ್ಟು ತಂಬುಳಿ ಇಷ್ಟೆ.ಅನ್ನ ಗಿನ್ನ ಎಂಬುದೆಲ್ಲ ಅದು ಹಬ್ಬಗಳ ದಿನ ಮಾಡುವ ಅಪರೂಪದ ಖಾದ್ಯ!
ಕೆಲವೊಂದು ಘಟನೆಗಳು ಅನುಭವಿಸಿದ ಕಾರಣಕ್ಕೊ ಏನೋ ಮನಸ್ಸಿನಿಂದ ಮರೆಯಲಿಕ್ಕೆ ಸಾಧ್ಯವಾಗುವುದಿಲ್ಲ .ಇಂಥದ್ದೇ ಒಂದು ಘಟನೆಯನ್ನು ಹೊಸಳ್ಳಿ,ಅರ್ಥಾತ್ ಭುಜಂಗ ನಗರದ ಜನರು ಹೇಳಿದರು.
ಲಾರಿ ಟಿಪ್ಪರಗಳ ಸೌಂಡ್ ಬಂದರೆ ಅವೇಶ
ಅದೇನಾಗ್ತಿತ್ತೋ ಏನೋ …ಆ ಹೆಂಗಸಿಗೆ ಲಾರಿ ಟಿಪ್ಪರುಗಳ ಸದ್ದು ಕೇಳಿದರೆ ಸಾಕಿತ್ತು.ಮೈಯಲ್ಲಿ ಆವೇಶಗೊಂಡವಳ ಹಾಗೆ ರಸ್ತೆಗೆ ಬಂದು ನಿಲ್ಲುತ್ತಿದ್ದಳು. ಅದೆಷ್ಟೇ ದೂರದಲ್ಲಿರಲಿ,ಏನೇ ಮಾಡುತ್ತಿರಲಿ, ಮಾಡುವುದನ್ನು ಅಲ್ಲಿಯೇ ಬಿಟ್ಟು ರಸ್ತೆಗೆ ಓಡಿ ಬರುತ್ತಿದ್ದಳು. ಎರಡೂ ಕೈಗಳನ್ನು ಅಗಲಿಸಿ ರಸ್ತೆ ಮಧ್ಯೆ ನಿಂತಳೆಂದರೆ ಯಾವ ವಾಹನಗಳೂ ಓಡಾಡುವಂತಿರಲಿಲ್ಲ.
“ಹಗಲೊತ್ತು ಆಗಿದ್ದರೆ ,ನಾವೆಲ್ಲ ಇರುತಿದ್ವಿ,ಬೈದು ಗೀದು ಎಳೆದುಕೊಂಡು ಬಂದು ಮನೆಗೆ ಕುಂದ್ರಸ್ತಿದ್ವಿ.ಆದರೆ ಒಂದೇ ಒಂದು ಒಳ್ಳೇ ಗುಣಾ ಏನು ಅಂದ್ರೆ,ಆಕಿಗೆ ಲಾರಿ ಟಿಪ್ಪರುಗಳ ಸವುಂಡು ಅಂದ್ರೆ ಆಗಿಬರ್ತಿದ್ದಿಲ್ಲ ಅನ್ನಾದೊಂದು ಬಿಟ್ರೆ,ಉಳಿದಂತೆ ಎಲ್ಲಾ ಕೆಲಸನಾ ಆಕಿ ಮಾಡಾಕಿ..”ಆತ ಹೇಳುತ್ತಲೇ ಇದ್ದ.
ಕೆಮ್ಮುತಿರುವ ಮುದುಕ,ಟಿಪ್ಪರಿನ ಗಾಲಿಗೆ ಸಿಕ್ಕ ಮಗನ ನೆನೆಯುತ್ತ,ಅದೇ ಟೀಬಿ ಪೇಶಂಟಿನ ಮುದುಕಿ, ಮಣ್ಣು ಹೊತ್ತು ಲಾರಿಗೆ ಅಡ್ಡಲಾಗಿ ನಿಲ್ಲುತ್ತಾಳೆ. ಎಲ್ಲರೂ ಆಕೆಯನ್ನು “ಹುಚ್ಚಿ”ಎಂದು ಕರೆಯುತ್ತಾರೆ.
ಸತ್ರೂ ಮಣ್ಣು ಮಾರಲು ಬಿಡುವುದಿಲ್ಲ
“ನಾನು,ಸತ್ರೂ ಮಣ್ಣು ಮಾರಲು ಬಿಡುವುದಿಲ್ಲ”ಎಂದು ಪ್ರತಿಭಟಿಸಿದ ಏಕಾಂಗಿ ಹೋರಾಟಗಾರ್ತಿ. ಈಕೆಯ ಕಾಟ ಬಹಳವಾಯಿತೆಂದೋ ಏನೋ ಅದೊಂದು ದಿನ,ರಸ್ತೆಯ ಮಧ್ಯೆ ಹೆಣವಾದಳು.ಬಿಡಲಾರೆ…ಬಿಡಲಾರೆ ಎಂದು ಹೇಳುತ್ತಿದ್ದ ಆ ಹುಚ್ಚಿಯ ದೇಹದ ಮೇಲೆಯೆ ಮಣ್ಣು ತುಂಬಿದ ಲಾರಿಗಳ ಚಕ್ರಗಳು ಸಲೀಸಾಗಿ ಹತ್ತಿಹೋದವು.
“ರಾತ್ರಿಹೊತ್ತು ಹಂಗಾಗಿ ಬುಡ್ತು ಸಾ..ಹಗಲೊತ್ತು ಎಂಗೋ ಕಾಪಾಡುತಿದ್ವಿ…ಹಾಳಾದ್ದು ಮುದುಕಿ,ಉಂಡು ಸುಮ್ಕೆ ಮಕ್ಕಳದು ಬಿಟ್ಟು ,ರೋಡಿಗೆ ಬಂದು ಧಣೇರ ಗಾಡಿಗಳಿಗೆ ಅಡ್ಡಾಕತಾಳ ಅಂದ್ರೆ..?”ಆತ ಹೇಳುತ್ತಲೆ ಇದ್ದ.
ಆಕೆಯದು ಎಂತಹ ಪ್ರತಿಭಟನೆ?
ನೋಡಲು ಫೋಟೋ ಏನಾದರೂ ಇದೆಯಾ..? ಎಂದು ಗೋಡೆಯ ಮೇಲೆ ನೋಡಿದೆ. ಹೊಲ ಮಾರಿದ ಸುದ್ದಿಗೆ ಎದಿಯೊಡೆದು ಸತ್ತವರ ಫೋಟೋಗಳು ಗೋಡೆಯ ತುಂಬಾ ರಾರಾಜಿಸುತ್ತಿದ್ದವು.
“ನಾ….ಸತ್ರೂ ಮಣ್ಣು ಮಾರಲು ಬಿಡಂಗಿಲ್ಲ” ಅಜ್ಜಿಯ ಕೂಗು ಮಾರ್ದನಿಸುತ್ತಿದೆ.
ಬಿ.ಶ್ರೀನಿವಾಸ