ಅದು ೧೯೮೬ನೆಯ ಇಸವಿ.ನಾನು ಎಸ್ಸೆಸ್ಸೆಲ್ಸಿ ನಂತರ ಪಿ.ಯು.ಸಿ.ವಿಜ್ಞಾನ ಓದಲು ಕೊಟ್ಟೂರಿನ ಕಾಲೇಜಿಗೆ ಸೇರಿಕೊಂಡಿದ್ದೆ.ಕೂಡ್ಲಿಗಿಯಿಂದ ಕೊಟ್ಟೂರಿಗೆ ದಿನನಿತ್ಯವೂ ಓಡಾಡಲು ಹದಿನೈದು ರೂಪಾಯಿಯ ಸ್ಟೂಡೆಂಟು ಬಸ್ ಪಾಸನ್ನು ಸರಕಾರ ದಯಪಾಲಿಸಿತ್ತು.ಆದರೆ ಒಮ್ಮೊಮ್ಮೆ ಕಂಡಕ್ಟರು,ಡ್ರೈವರುಗಳೂ ನಮ್ಮನ್ನು ಕಂಡವರೇ ಬಸ್ಸೂ ನಿಲ್ಲಿಸದೆ ಓಡಿಸಿಕೊಂಡು ಹೋಗಿಬಿಡೋರು.
ಬೆಳ್ಳಂಬೆಳಿಗ್ಗ ಏಳೂವರೆಗೆಲ್ಲ ಕೆಮಿಷ್ಟ್ರಿ ಲೆಕ್ಚರ ಭದ್ರಶೆಟ್ಟರ ಲ್ಯಾಬಿಗೆ ಓಡಬೇಕಿತ್ತು.ಥೇಟು ಮಹಾಭಾರತದ ವರ್ಣನೆಯ ಭೀಮನ ಪ್ರತಿರೂಪದಂತಿದ್ದ ಭದ್ರಶೆಟ್ಟರದು ಖಡಕ್ ಧ್ವನಿ. ಗದರಿಕೆಯ ಜೊತೆ ಜೊತೆಗೆ ಅವರೇ ಮೊದಲು ಬೆವೆತು ಆಯಾಸ ಮಾಡ್ಕೊಳ್ಳೋರು.ಅವರಿಗಿಂತ ಅವರ ಹಳೇ ಸೈಕಲ್ಲೂ ಭಲೇ ಸವುಂಡು ಮಾಡುತ್ತಿತ್ತು.
“ಲೇಯ್ ತಮ್ಮಾ…ಯಾವ ಮಠದಿಂದ ಬಂದೀಯ ?”ಇದು ಅವರು ನನಗೆ ಕೇಳಿದ ಮೊದಲ ಪ್ರಶ್ನೆಯಾಗಿತ್ತು.ಹತ್ತನೆಯ ತರಗತಿಯವರೆಗೂ ಶುದ್ಧ ಕನ್ನಡ ಮೀಡಿಯಮ್ಮಿನ ಹರಿಜನಕೇರಿ ಶಾಲೆ,ಮೀನು,ಮಾಂಸ ಮಾರುವ ಸಂತಿಯ ಬಜಾರಿನಲ್ಲಿರುವಾ ಸೊಲ್ಲಮ್ಮನಗುಡಿ ಶಾಲೆ,ನಂತರ ದೇವದಾಸಿಯರೇ ಇರುವ ಏಳನೆ ವಾರ್ಡಿನ ಪ್ಯಾಟಿ ಬಸಣ್ಣನ ಗುಡಿ ಶಾಲೆ ಮತ್ತು ಇದ್ದಂತವರೇ ಇರುವ ಬಾಪೂಜಿನಗರದ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಕೂಡ್ಲಿಗಿ ,ಎಂದು ಯಾವುದನ್ನ ಮೊದಲು ಹೇಳಬೇಕೆಂದು ತಡವರಿಸುವಾಗಲೇ ಭದ್ರಶೆಟ್ಟರ ಕೆಂಪನ್ನ ಕೆಂಪು ಕಣ್ಣು ನನ್ನ ಪಾದಗಳ ಮೇಲೆ ಬಿದ್ದುಬಿಟ್ಟಿತು!.
ನಖಶಿಖಾಂತ ಉರಿದುಹೋದ ಶೆಟ್ಟರು “ಲೇಯ್ ತಮ್ಮಾ..ನಡಿ ನಡೀ..ನೀನ್ ಹೊರಗ ನಡೀ.ಇಲ್ಲೇನ್ ಕೊಟ್ರದೇವರ ಜಾತ್ರೀ ನಡಿತೈತ ಅಂತ ಬಂದೇನ್? ನಡಿ..ಹೊರಗನಡಿ”ಎಂದು ಹೊರಗೆ ಹಾಕಿದಾಗ ಎಷ್ಟೋಹೊತ್ತು ಅವರೇಕೆ ನನ್ನನ್ನು ಹೊರಗೆಹಾಕಿದರು? ಎಂದು ನನಗೆ ಗೊತ್ತಾಗಿಯೇ ಇರಲಿಲ್ಲ.
ಹೈಸ್ಕೂಲಿನ ಕನ್ನಡ ಮಾಸ್ತರ ನಾಗರಾಜರ ಮೆಚ್ಚಿನ ಶಿಷ್ಯನೂ ಆಗಿದ್ದ ನನಗೆ ಅವರು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ ಡರ್ಬಾನಿನಲ್ಲಿ ಗಾಂಧಿಯನ್ನು ಹೊರನೂಕಿದ ದಟ್ಟ ಅನುಭವದ ನೆನಪಾತು.
ತೀವ್ರ ಅವಮಾನದಿಂದ ಎಷ್ಟೋ ಹೊತ್ತು ಕಾಲೇಜಿನ ಹೊರಗಿನ ಬೇವಿನಮರದ ನೆರಳಲ್ಲಿಯೇ ನಿಂತಿದ್ದೆ.ಎದುರಿಗಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಹಾಸ್ಟೆಲಿನಲ್ಲಿ ಬಿಸಿಬಿಸಿ ಜೋಳದ ರೊಟ್ಟಿ ಬಡಿತದ ಸದ್ದು ಹೊಟ್ಟೆಯ ಹಸಿವನ್ನು ನೆನಪಿಸುತ್ತಿತ್ತು.
ರೊಟ್ಟಿಗಳ ಚಿತ್ರಗಳೂ ಅದೇಕೋ ಏನೋ ಅಪ್ಪನ ಬಡಕಲು ಬಂಡಿಗಾಲಿಗಳ ನೆನಪೂ ಒಟ್ಟೊಟ್ಟಿಗೆ ಬಂದವು.ಆದರೂ ಲೆಕ್ಚರ್ರು ನನ್ನನ್ನೇಕೆ ಹೊರಗೆ ಕಳುಹಿಸಿದರು? ಬಹುಶಃ ಇಂಗ್ಲಿಷಿನಲ್ಲಿ ಮತ್ತೇನಾದರೂ ಹೇಳಿದರಾ? ನನಗೊಂದೂ ಅರ್ಥವಾಗದೆ ಹೀಗೆ ಯೋಚಿಸುತ್ತಲೇ ಮಧ್ಯಾಹ್ನದವರೆಗೂ ಕಾದು ಕುಳಿತೆ.
ನನ್ನೂರಿನ ಗೌಡ್ರುಬಸಣ್ಣರ ಸೋಮು ಬಂದು,”ಯೇ ಕೆಮಿಸ್ಟ್ರಿ ಲ್ಯಾಬಿಗೆ ಚಪ್ಪಲಿ ಇಲ್ಲದಂಗ ಬರಾಂಗಿಲ್ಲೋ” ಅಂತ ಹೇಳಿದಾಗಲೇ ನನ್ನ ಕಾಲುಗಳಿಗೂ ಚಪ್ಪಲಿಗಳು ಬೇಕು ಅಂತನ್ನಿಸಿತು.ನನ್ನ ಪಾದಗಳಿಗೂ ಬೆಲೆ ಬಂತು ಎಂದು ಸಂತೋಷವಾದದ್ದು ಒಂದರೆಕ್ಷಣವಷ್ಟೆ.ಮತ್ತೆ ಅಪ್ಪನಿಗೆ ಕಷ್ಟ.ಹೀಗೆ ಮಧ್ಯಾಹ್ನದ ಕ್ಲಾಸುಗಳಲ್ಲಿ ಕುಳಿತು ಪಾಠ ಕೇಳಲು ಪಾದರಕ್ಷೆಗಳು ಕಡ್ಡಾಯವಿಲ್ಲದ್ದರಿಂದಾಗಿ ಪಾಠ ಕೇಳಿದೆ ಅಂದರೆ ಕೇಳಿದೆ ಅಷ್ಟೆ.
ಮ್ಯಾಥಮ್ಯಾಟಿಕ್ಸ್ ಲೆಕ್ಚರರ್ ಚಾನುಕೋಟಿಮಠದ ಕೊಟ್ರಯ್ಯನವರ ಪಾಠದ ತುಂಬಾ ಚಪ್ಪಲಿಗಳದೆ ಲೆಕ್ಕಾಚಾರ.ಮ್ಯಾಟ್ರಿಸಸ್ ಬಗ್ಗೆ ಏನೋ ಪಾಠ ಮಾಡಿದಂಗಿತ್ತಷ್ಟೆ.ತಲೆ ತುಂಬಾ ಹೊಲದಲ್ಲಿ ದುಡಿದು ಬಂದ ಅಪ್ಪ ಸುಸ್ತಾಗಿರಬಹುದು,ಮನೆಗೆ ಬಂದ ತಕ್ಷಣ ಚಪ್ಪಲಿ ಬೇಕೆಂದು ಹೇಗೆ ಕೇಳುವುದು ?ನಿನಗೂ ಕಾಲೇಜು ಶೋಕಿ ಶುರುವಾತೇನು ?ಎಂದು ನೊಂದುಕೊಂಡು ಬಿಟ್ಟರೆ? ಹೀಗೆ ಯೋಚಿಸುತ್ತಲೇ ಸಂಜೆಯಾಗಿಹೋಗಿತ್ತು.ಕೊಟ್ಟೂರು ಸ್ವಾಮಿಯ ದೇಗುಲದ ಮುಂದಿನ ಆಜು ಬಾಜು ಮಂಡಕ್ಕಿ ಮೆಣಸಿನಕಾಯಿ ಹೋಟೆಲುಗಳಿಂದ ವಾಸನೆ ಮೂಗಿಗೆ ಅಡರಿ ಮತ್ತಷ್ಟು ಹಸಿವೆಯಾಗುತ್ತಿತ್ತು.
ಮುಂಜಾನೆ ಆರಕ್ಕೆದ್ದು ತಂಗಳು ರೊಟ್ಟಿ ಗುರೆಳ್ಳುಚಟ್ನಿ ತಿನ್ನೋಕು ಆಗದೆ ಹಂಗೆ ಬರಬಾರದಿತ್ತು ಅಥವಾ ನಾಳೆಯಿಂದ ದೂರವಾದರೂ ಚಿಂತಿಲ್ಲ ಈ ಮಂಡಕ್ಕಿ ಮೆಣಸಿನಕಾಯಿ ಹೊಟೆಲ್ಲುಗಳ ದಾರಿ ಬಿಟ್ಟು ವಾಸನೆಯಿಲ್ಲದ ಬೇರೆ ದಾರಿ ಹುಡುಕಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗಾದರೆ ಮಾತ್ರ ಇಂಥಾ ಹಸಿವಿನ ಸಂಕಟ ಮತ್ತು ತಿನ್ನುವ ಆಸೆಯಿಂದಲೂ ಪಾರಾಗಬಹುದು ಎಂದು ಮನದಲ್ಲಿಯೇ ಲೆಕ್ಕಹಾಕ್ಕೊಂತಿದ್ದೆ.
ಅದು ಹೆಂಗೋ ಏನೋ ಮಾಡಿ ಅಪ್ಪ ಸಂತಿಬಜಾರಿನಲ್ಲಿ ಹತ್ರುಪಾಯಿಗೊಂದು ಜೊತಿಯಂತೆ ಮೆತ್ತನೆಯ ಇಷ್ಟು ದಪ್ಪನೆಯ ಹವಾಯಿ ಚಪ್ಪಲಿ ಕೊಡಿಸಿದ.ಅಪ್ಪನ ಬಗ್ಗೆ ಹೆಮ್ಮೆ ಮತ್ತು ನಾನೂ ಕೂಡ ಎರಡಿಂಚು ಎತ್ತರವಾದವನಂತೆ ಕಾಣುತ್ತಿದ್ದೆ . ಭದ್ರಶೆಟ್ಞರು ನನ್ನ ಪಾದಗಳ ರಕ್ಷಕರಾದ ಹವಾಯಿ ಚಪ್ಪಲಿಯ ನೀಲಿಕಲರಿನ ಆ ಎರಡು ರಬ್ಬರ್ ಸಾಲುಗಳನ್ನೇ ನೋಡಿ “ಹ್ಞೂಂ…”ಎಂದಬ್ಬರಿಸಿ ಇಂಗ್ಲಿಷಿನಲ್ಲಿ ಏನೇನೋ ಹೇಳತೊಡಗಿದರು.
ದಿನಾ ಓಡಾಡ್ಕೇಂತ ಓದಾಕಾಗದಿಲ್ಲ ಎಂದಾಗ ಏನು ಮಾಡುವುದೆಂದು ತೋಚದಿದ್ದಾಗ ಕೊಟ್ಟೂರಿನಲ್ಲಿ ಎಸ್ಸಿ ಎಸ್ಟಿ ಹಾಸ್ಟೆಲಿರುವುದು ಗೊತ್ತಾಯಿತು. ಇದ್ದ ಎರಡು ಬಟ್ಟೆಗಳಿಗೆ ಮತ್ತೆ ಮತ್ತೆ ಕಲ್ಲು ನೀಲಿ ಹಾಕ್ಕೊಂಡು ಬರುತ್ತಿದ್ದ,ಆಗ್ತಾನೆ ಕಣ್ ಕಣ್ ಬಿಡುತ್ತಿದ್ದ ದಲಿತ ಸಂಘರ್ಷ ಸಮಿತಿಯ ಜಯಣ್ಣನವರು ಕಾಂಟ್ರಾಕ್ಟ್ ಮ್ಯಾಲೆ ನಡೆಸಲು ತೆಗೆದುಕೊಂಡಿರುವುದೆಂದು ಗೊತ್ತಾಗಿ,ನಾನು ನನ್ನ ಸಂಬಂಧಿಕನೂ ಆದ ಹೆಗ್ಗಪ್ಪನ ಜೊತೆಗೆ ಜಯಣ್ಣನವರನ್ನು ಹೋಗಿ ಕಂಡೆವು.
ಹಾಸ್ಟೆಲಿಗೆ ಸೇರಿಸಿಕೊಳ್ಳುವಂತೆ ಬೇಡಿಕೆಯಿತ್ತೆವು.ಕಪ್ಪು ಮೈಯ್ಯ ಜಯಣ್ಣನವರ ಕೂದಲು ಆಗಲೇ ಬಿಳಿ ಬಣ್ಣಕ್ಕೆ ತಿರುಗಿದ್ದವು.ಅವರ ಟ್ರೇಡ್ ಮಾರ್ಕ್ ಆದ ಕಲ್ಲು ನೀಲಿಯಲಿ ಅದ್ದಿದ ಬಿಳಿ ಶರ್ಟು -ಪಂಚೆಯಲಿ ಅವರೇನೊ ಗಂಭೀರತೆಯನ್ನು ಪ್ರದರ್ಶಿಸಲು ಹೆಣಗಾಡುತ್ತಿದ್ದರು.
ಎಷ್ಟೋ ಹೊತ್ತು ಬಾಡಿಗೆ ಕಟ್ಟಲಿಕ್ಕಾಗದೆ ಒದ್ದಾಡುವ,ದಿನನಿತ್ಯವೂ ಹುಡುಗರಿಗೆ ಹೊಟ್ಟೆ ತುಂಬಿಸಲು ಅವರು ಉದ್ರಿಯಂತೆ ದಿನಸಿ ಸಾಮಾನುಗಳ ಪಟ್ಟಿಯನ್ನು ತರುವ ಕಷ್ಟಗಳನ್ನೂ ಹೇಳಿಕೊಂಡರು.ಅದೇಕೋ ಅವರ ಮೇಲೊಂದು ಸದಾ ನೀಲಿ ಕಲರಿನದ್ದೇ ಒಂದು ಟವೆಲ್ಲಿರುತ್ತಿತ್ತು.ನನಗೆ ಪಾಪ ಜಯಣ್ಣೋರು !ಅಂತನ್ನಿಸಿತು.
ಇಂತಿಪ್ಪ ಜಯಣ್ಣರಿಗೆ ಏನೇ ಮಾಡಿದರೂ ಸರ್ಕಾರದಿಂದ ಅನುದಾನ ಬರಲಿಲ್ಲ.ಬರೋವರೆಗೂ ಉಪವಾಸ ಕೂಡಿಸುವಂತಿಲ್ಲ! .ಅಂತೂ ಇಂತೂ ಅವರು ಆಗಿನ ಸ್ನೇಹಿತ,,ಕಮ್ ರೈತ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಕುಪ್ಪಿನಕೇರಿ ವೀರಣ್ಣರ ಜೊತೆ ಮಾಡಿಕೊಂಡು ಹೇಗೋ ಏನೋ ಬಾಡಿಗೆ ಕಟ್ಟಡವೊಂದರಲ್ಲಿ ಹಾಸ್ಟೆಲನ್ನು ನಡೆಸಿದರು.ಬಾಡಿಗೆ ಕಟ್ಟಲಾಗಿದೆ ಪರದಾಡುತ್ತಿದ್ದರು.
ಅದೊಂದು ದಿನ…
ಹಾಸ್ಟೆಲಿನಲ್ಲಿ ಗದ್ದಲವೋ ಗದ್ದಲ.ನಡೆಸಲಿಕ್ಕಾಗಂಗಿಲ್ಲಂದ್ರೆ ಯಾಕಿರಬೇಕು.?ಎಂದು ಹುಡುಗರೆಲ್ಲ ಆಳಿಗೊಂದರಂತೆ ಕಲ್ಲು ಒಗೆಯುತ್ತಿದ್ದಾರೆ.
ನೀಲಿ ಟವೆಲಿನ ಜಯಣ್ಣರೂ..ಹಸಿರು ಟವೆಲಿನ ವೀರಣ್ಣ ಕೂಡ ಅಸಹಾಯಕರಂತೆ ನಿಂತಿದ್ದರು.”ನೋಡ್ರಪಾ…ಇಲ್ಲೆಂತಲ್ಲ,ನನ್ನ ಮನ್ಯಾಗೂ ಸೈತ ಉಪವಾಸ ಅದೀವಿ.
ಗೌರ್ಮೆಂಟ್ನಿಂದ ಅನುದಾನವೂ ಆರು ತಿಂಗಳಿಂದ ಬಂದಿಲ್ಲ.ತಾನು ಮನೆ ಹೊಲದ ಜ್ವಾಳ ತಂದು ಮುದ್ದೆ ಮಾಡೇವಿ.ಸ್ವಲ್ಪ ದಿನ ಸುಧಾರಿಸಕಬಕು ಎಂದು ಪರಿಪರಿಯಾಗಿ ಬೇಡಿಕೊಂಡರು.ಎಲ್ಲೆಲ್ಲಿಂದಲೋ ಕಾಡಿ ಬೇಡಿ ಹಸಿಜ್ವಾಳವನ್ನೆ ಗಿರಣಿಗೆ ಹಾಕಿಸಿದ್ದರು.
ಹುಡುಗರ ತಟ್ಟೆಗಳಲ್ಲಿದ್ದ ಮುದ್ದೆಗೆ ಹಸಿ ಹಸಿ ಜ್ವಾಳದ ವಾಸನೆಯಿತ್ತು.ಒಂಥರಾ ಮುಗ್ಗುಲು ಬಂದ ಹಾಗಿತ್ತು.ಬಿಸಿಬಿಸಿ ಹಬೆಯಾಡುತ್ತಿದ್ದ ಮುದ್ದೆಯನ್ನು ಹಂಗೇ ಜಯಣ್ಣನವರ ಮುಖಕ್ಕೆ,ವೀರಣ್ಣರ ಮುಖಕ್ಕೆ ಹುಡುಗರು ಒಗ್ದುಬಿಟ್ಟರು.ಬಿಸಿ ಬಿಸಿ ಮುದ್ದೆ ಬಿದ್ದ ಬಿಸಿಗೆ ಕ್ಷಣ ಹೊತ್ತು ಹೌಹಾರಿದಂತಾಗಿ ಇಬ್ಬರೂ ಮಾತನಾಡದೆ ಸುಮ್ಮನೆ ಕುಳಿತುಬಿಟ್ಟರು.
ಹಸಿಹಸೀ ಜ್ವಾಳದ ಹಿಟ್ಟಿನಿಂದ ಮಾಡಿದ್ದು ಮುದ್ದೆಯಾದ್ದರಿಂದ ಜಿಗಿ ಬಂದಿರಲಿಲ್ಲ,ಗಂಜಿಯಂತೆ ಅವರ ಮುಖದ ತುಂಬಾ ಇಳಿಯುತ್ತಿತ್ತು. ಹುಡುಗರಿಗೆ ಅವರ ಯಾವ ಸಮಜಾಯಿಷಿಗಳೂ ಬೇಕಿರಲಿಲ್ಲ. ಮೊನ್ನೆ ದಿನ, ರೈತಸಂಘದ ವೀರಣ್ಣ,ದ.ಸಂ.ಸ.ಯ ಜಯಣ್ಣ ತೀರಿಹೋದರೆಂದು ತಿಳಿದು ದುಃಖಿತನಾದೆ.ಆ ಹೊತ್ತಿನ ಅವರಿಬ್ಬರ ಅಸಹಾಯಕ ಮುಖಗಳು ಮತ್ತೊಮ್ಮೆ ಕಣ್ಣಮುಂದೆ ಬಂದವು.