ದಾವಣಗೆರೆ (Davanagere): ವಿಶ್ವದಲ್ಲಿನ ಭಯೋತ್ಪಾದನೆ ನಿಯಂತ್ರಣ, ವಿಶ್ವದಲ್ಲಿ ಶಾಂತಿ ನೆಲೆಸಲು ಬಸವತತ್ವದಿಂದ ಮಾತ್ರ ಸಾಧ್ಯ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಕೆಎಸ್ಆರ್ಟಿಸಿಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಬಸವಜಯಂತಿ ಹಾಗೂ ಶಾಮನೂರು ಶಿವಶಂಕರಪ್ಪನವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವತತ್ವ ಅಳವಡಿಸಿಕೊಂಡರೆ ಜಗತ್ತಲ್ಲಿ ಯಾವ ಯುದ್ಧವೂ ನಡೆಯುವುದೇ ಇಲ್ಲ. ಉಗ್ರವಾದ, ಭಯೋತ್ಪಾದನೆ ನಿಯಂತ್ರಣ ಮಾಡಲು ಬಸವತತ್ವ ಪರಿಪಾಲನೆ ಅಗತ್ಯವಾಗಿದ್ದು, ಬಸವತತ್ವದ ಅನ್ವಯ ಪ್ರೀತಿಯಿಂದ ಮಾತ್ರ ದ್ವೇಷ ಅಳೆದು ಶಾಂತಿ ನೆಲೆಸಲಿದೆ. ಪ್ರೀತಿಯಿಂದ ಮಾತ್ರ ಜಗತ್ತು ಉಳಿಯುತ್ತದೆ ಎಂದು ಪ್ರತಿಪಾದಿಸಿದರು.
ಸಮಾಜದ ಮುಖಂಡ ಚಂದ್ರಶೇಖರ ಪೂಜಾರ್ ಮಾತನಾಡಿ, ಕ್ಷೇಮಾಭಿವೃದ್ಧಿ ಸಂಘ ಎಂದರೆ ಒಳ್ಳೆಯ ಸ್ನೇಹಿತರ ಸಮ್ಮಿಲನದಂತೆ. ಈ ಸಂಘಟನೆಯಿಂದ ಬಸವಜಯಂತಿ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ ನೌಕರರ ಸಮಸ್ಯೆಗಳಿಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಈ ಸಂಘಟನೆ ಕಾರ್ಯನ್ಮುಖವಾಗಬೇಕು ಎಂದು ಆಶಿಸಿದರು.
Read also : ಮನುಷ್ಯನಿಗೆ ‘ಹಣ-ಆಸ್ತಿಗಿಂತ’ ನೆಮ್ಮದಿ-ಮನಃಶಾಂತಿ ಮುಖ್ಯ : ಶಾಸಕ ಕೆ.ಎಸ್.ಬಸವಂತಪ್ಪ
ಹಿರಿಯ ಸಾಹಿತಿ ಶಾಂತಗಂಗಾಧರ, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಎಫ್. ಬಸಾಪುರ ಅಧ್ಯಕ್ಷತೆ ವಹಿಸಿದ್ದರು, ಶಾಸಕ ಶಿವಗಂಗಾ ಬಸವರಾಜ್, ಸಮಾಜದ ಮುಖಂಡರಾದ ಆರುಂಡಿ ನಾಗರಾಜ್, ವಾಗೀಶಸ್ವಾಮಿ, ವಾಕರಾರಸಾ ಸಂಸ್ಥೆಯ ಮುಖ್ಯ ಅಭಿಯಂತರ ಸಿದ್ದೇಶ್ವರ್ ಹೆಬ್ಬಾಳ್, ಅಶೋಕ್ ಗೋಪನಹಾಳ್ ಇತರರು ಇದ್ದರು.