ದಾವಣಗೆರೆ (Davanagere): ಮನುಷ್ಯನಿಗೆ ಶಾರೀರಿಕ ವ್ಯಾಯಾಮದ ಜತೆಗೆ ಮನಸ್ಸಿನ ವ್ಯಾಯಾಮವೂ ಅಗತ್ಯ. ಶರೀರದ ವ್ಯಾಯಾಮಕ್ಕೆ ಆಸನಗಳ ಅಗತ್ಯವಿದ್ದರೆ, ಮನಸ್ಸಿನ ವ್ಯಾಯಾಮಕ್ಕೆ ಧ್ಯಾನ ಅತ್ಯಗತ್ಯ ಎಂದು ಬ್ರಹ್ಮಕುಮಾರಿ ಲೀಲಾಜಿ ಅಭಿಪ್ರಾಯಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಸಪ್ತರ್ಷಿ ಯೋಗಧಾರ ಸ್ಟೋರ್ಟ್ಸ್ ಅಕಾಡೆಮಿ ವತಿಯಿಂದ ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಮಹಿಳೆಯರ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗಾಸನದ ಜತೆಗೆ ಪರಮಾತ್ಮನ ಧ್ಯಾನವೂ ಸೇರಿದರೆ ಜೀವನದಲ್ಲಿ ಎಲ್ಲವನ್ನೂ ಸುಲಭವಾಗಿ ಸಾಽಸಲು ಸಹಕಾರಿಯಾಗುತ್ತದೆ ಎಂದರು.
ಕೆಲ ದಶಕಗಳ ಹಿಂದೆ ಯೋಗ ಹೆಚ್ಚು ಪ್ರಚಲಿತವಾಗಿರಲಿಲ್ಲ. ಏಕೆಂದರೆ, ಆಗ ನಮ್ಮ ಅಜ್ಜ-ಅಜ್ಜಿಯವರು ಹೊಲ-ಮನೆಯ ಎಲ್ಲ ಕೆಲಸಗಳನ್ನು ಸ್ವತಃ ಮಾಡುತ್ತಿದ್ದರು. ಹೊಲದಲ್ಲಿ ಉಳುವ, ಬಿತ್ತುವ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಕುಟ್ಟುವುದು, ಆರಿಸುವುದು, ತೊಳೆಯುವುದು ಹೀಗೆ ಎಲ್ಲ ಕೆಲಸಗಳ ಮಾಡುತ್ತಿದ್ದರು. ದೈಹಿಕ ಶ್ರಮದ ಕೆಲಸಗಳಲ್ಲಿಯೇ ಯೋಗಾಸನದ ಎಲ್ಲ ಆಸನಗಳೂ ಇರುವುದರಿಂದ ಅವರು ಪ್ರತ್ಯೇಕವಾಗಿ ಯೋಗಾಸನ ಮಾಡುತ್ತಿರಲಿಲ್ಲ. ಆದರೆ, ನಾವು ಇಂದು ನಮ್ಮ ಮನೆಯ ಎಲ್ಲ ಕೆಲಸಗಳನ್ನು ನಾವೇ ನಿರ್ವಹಿಸದೇ ಇರುವುದರಿಂದ ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಬೇಕಾದ ಸನ್ನಿವೇಶ ಬಂದಿದೆ ಎಂದರು.
Read also : Political analysis | ಅಮಿತ್ ಶಾ ಆತುರಕ್ಕೆ ಏನು ಕಾರಣ?
ದೇಶಕ್ಕೆ ಬ್ರಿಟೀಶರು ಸೇರಿದಂತೆ ಇನ್ನಿತರ ದೇಶಗಳಿಂದ ಪರಕೀಯರು ಬಂದಾಗ ಮಹಿಳೆಯರ ರಕ್ಷಣೆ ದೃಷ್ಟಿಯಿಂದ ಅವರನ್ನು ಸಮಾಜದಲ್ಲಿ ಹೆಚ್ಚು ಮುಂದೆ ಹೋಗಲು ಬಿಡುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದ್ದು ಸ್ವತಂತ್ರ ಭಾರತದಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂದೆ ಬಂದಿದ್ದಾರೆ. ಆದರೆ, ಕೆಲ ಯುವತಿಯರು ಆಧುನಿಕತೆಯ ಹೆಸರಲ್ಲಿ ತಮ್ಮ ಉಡುಗೆ-ತೊಡುಗೆ, ಹಾವ-ಭಾವದಲ್ಲಿ ನಮ್ಮ ಪ್ರಾಚೀನ ಸಂಸ್ಕೃತಿ ಮರೆಯುತ್ತಿರುವುದು ವಿಷಾದನೀಯ. ಮಹಿಳೆಯರು ಯಾವ ಕ್ಷೇತ್ರದಲ್ಲಿ ಎಷ್ಟೇ ಎತ್ತರಕ್ಕೆ ಹೋದರೂ ಮಾನವೀಯತೆ, ತ್ಯಾಗ, ವಾತ್ಸಲ್ಯ, ಕರುಣೆಯಂಥ ಮೂಲಗುಣಗಳನ್ನು ತೊರೆಯಬಾರದು ಎಂದರು.
ಅಂತಾರಾಷ್ಟ್ರೀಯ ಯೋಗಪಟುಗಳಾದ ಓರಿಸ್ಸಾದ ಸುಶ್ಮಿತಾ ರಾಯ್, ಚೆನೈನ ಗೌರಿ, ಪೊಲೀಸ್ ನಿರೀಕ್ಷಕಿ ಮಲ್ಲಮ್ಮ ವೇದಿಕೆಯಲ್ಲಿದ್ದರು. ಅಕಾಡೆಮಿಯ ಪ್ರಮುಖರಾದ ಡಾ. ಜೈಮುನಿ, ಡಾ. ಪರಶುರಾಮ್ ಇನ್ನಿತರರು ಕಾರ್ಯಕ್ರಮದಲ್ಲಿದ್ದರು.