ದಾವಣಗೆರೆ (Davangere): ಸಾಹಿತ್ಯ, ಬರಹಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವ ಕಾಳಜಿ ಹೊಂದಿರಬೇಕು ಎಂದು ಹಿರಿಯ ಲೇಖಕಿ ಎಂ.ಎಸ್.ಮಂಜುಳಾ ಮಂಜಪ್ಪ ಅಭಿಪ್ರಾಯಿಸಿದರು.
ನಗರದ ರೋಟರಿ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ನಡೆದ ತಮ್ಮ ಕೃತಿ “ನುಡಿಬಾಣ” ಸತ್ಯದರ್ಶನ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದ ಅವರು, ಯುವ ಜನಾಂಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಬರಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಾಸ್ತವಿಕ ಸಂಗತಿಗಳು ಮತ್ತು ನೈತಿಕತೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಕೃತಿ ಬೆಳಕು ಚೆಲ್ಲಲಿದೆ ಎಂದರು.
ಸತ್ಯ ದರ್ಶನ ಇಂದು ಯಾರಿಗೂ ಬೇಕಿಲ್ಲ. ಎಲ್ಲರೂ ಅಹಂ ಪ್ರಜ್ಞೆಯಿಂದ ಬಳಲುತ್ತಿದ್ದಾರೆ. ನಾನೇ ಶ್ರೇಷ್ಠ ಎಂಬ ಅಹಂನಲ್ಲಿ ಎಲ್ಲರೂ ಇದ್ದಾರೆ. ಹೊನ್ನು ಬೇಕೆ ಹೊರತು ಹೊನ್ನುಡಿ ಯಾರಿಗೂ ಬೇಡವಾಗಿದೆ. ಒಳ್ಳೆಯ ಮಾತುಗಳು ರುಚಿಸುವುದಿಲ್ಲ. ಇಂಥಹ ಸಂದರ್ಭದಲ್ಲಿ ಅಂಥವರಿಗೆ ನನ್ನ ಬರಹದ ಮೂಲಕ ಮೊಟಕಿ, ಕುಟುಕಿ, ಕಟಕಿಯಾಡುವ ಕೆಲಸ ಮಾಡಿದ್ದೇನೆ ಎಂದರು.
ಚಿತ್ರದುರ್ಗದ ಸಾಹಿತಿ ಶೈಲಾ ಜಯಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ವೀಣಾಕೃಷ್ಣಮೂರ್ತಿ ವಹಿಸಿದ್ದರು.
ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಎಸ್.ಎಂ.ಮಲ್ಲಮ್ಮ ಸ್ವಾಗತಿಸಿದರು.
ಇದೇ ವೇಳೆ ನಡೆದ ಕವಿಗೋಷ್ಠಿಯಲ್ಲಿ ಅನೇಕರು ಕವನ ವಾಚಿಸಿದರು.