ನೀಲ ಕುರುಂಜಿ!
ಸ್ಟ್ರಾಬಿಲೆಂತಸ್ ಕುಂಥಿಯಾನಾ ಎಂಬ ವೈಜ್ಞಾನಿಕ ಹೆಸರಿನ ಇದೊಂದು ಹೂವ್ವೆ ಮೈವೆತ್ತ ಸಸ್ಯ. ದೀರ್ಘ ಕಾಲಕ್ಕೊಮ್ಮೆ ಅರಳುವ ಈ ಹೂವು, ಪ್ರತಿ ಹನ್ನೆರೆಡು ವರುಷಗಳಿಗೊಮ್ಮೆ ನೀಲಿ ನೇರಳೆ ಬಣ್ಣ ಮಿಶ್ರಿತ ಅರಳಿ ಹೂಗಳ ಮಹಾದರ್ಶನವನ್ನೆ ಮಾಡಿಸುತ್ತದೆ. ಪರ್ವತಶ್ರೇಣಿಗಳುದ್ದಕ್ಕೂ ಏಕಕಾಲಕ್ಕೆ ಅರಳಿ ಹೂ ಹಬ್ಬವೆ ಜರುಗುತ್ತದೆ.
ಇಲ್ಲಿನ ಷಣ್ಮುಖ ಸ್ವಾಮಿ ಸ್ಥಳೀಯ ಹುಡುಗಿಯನ್ನು ಲಗ್ನವಾಗಲು ಇದೇ ನೀಲಕುರುಂಜಿ ಹೂ ಮಾಲೆ ಧರಿಸಿ ಹೊರಡುತ್ತಾನೆ ಎಂಬ ಪ್ರತೀತಿಯೂ ಇದೆ. ಆ ಸಮಯದಲ್ಲಿ ಇಲ್ಲಿನ ಗಂಡಿ ನರಸಿಂಹನಿಗೂ, ಷಣ್ಮುಖ, ಪಾರ್ವತಿಯ ಪೂಜೆಗಳಿಗೆಲ್ಲ ಈ ಹೂವನ್ನೆ ಬಳಸಲಾಗುತ್ತದೆ.
ಹೂ ಸಸ್ಯಗಳ ಮಾರಣ ಹೋಮವೆ ನಡೆದಿತ್ತು
ಸೊಂಡೂರಿನ ಪರ್ವತ ಶ್ರೇಣಿಯಲ್ಲಿ ಅಪರೂಪಕ್ಕೆ ಅರಳುವ ಈ ಹೂ ಸಾಮ್ರಾಜ್ಯ ನೋಡಲು ಕಣ್ಣೆರೆಡು ಸಾಲದಾಗುತ್ತಿದ್ದವು. ೨೦೧೭ರಲ್ಲಿ ಹೂ ಗಳ ಮಹಾದರ್ಶನದಷ್ಟೊತ್ತಿಗೆ ಹೂ ಸಸ್ಯಗಳ ಮಾರಣಹೋಮವೆ ನಡೆದಿತ್ತು. ಹೂವು, ಜೇನ್ನೊಣ, ದುಂಬಿಗಳ ಆಕರ್ಷಿಸಿ ಪರಾಗಸ್ಪರ್ಶಗೊಂಡು ಮನುಷ್ಯರ ಮನ ಅರಳಿತೆಂದು ಭಾವಿಸಿದ ನಂತರವೇ ಬಾಡಿ ನೆಲಕ್ಕುರುಳುವುದು.
ಅರಳುವುದು ಹನ್ನೆರೆಡು ವರುಷಗಳ ನಂತರವೆ
ಮುವ್ವತ್ತು ಸೆಂಟಿಮೀಟರನಿಂದ ಮರ ಗಿಡಗಳ ಸಪೊರ್ಟ್ ಸಿಕ್ಕರೆ ನೂರು ನೂರೈವತ್ತು ಸೆಂಟಿಮೀಟರುಗಳಷ್ಟು ಎತ್ತರ ಬೆಳೆಯಬಲ್ಲ ಸಸ್ಯ, ಒಮ್ಮೆ ಅರಳಿದರೆ ಮತ್ತೆ ಅರಳುವುದು ಹನ್ನೆರೆಡು ವರುಷಗಳ ನಂತರವೆ. ಹನ್ನೆರೆಡು ವರುಷಗಳವರೆಗೆ ಬದುಕಿರುವುದಾದರೂ ಹೇಗೆ? ಎಂದು ಯೋಚಿಸಿದ್ದೇ ತಡ, “ನಾವು ಬದುಕಿಲ್ಲೇನು?”ಎಂಬಂಥ ಉತ್ತರ , ಬದುಕಿಯೂ ಸತ್ತಂತಿರುವ ಜನರಿಂದ ಥಟ್ಟಂತ ಬಂದು ಬಿಡುತ್ತೆ. ಅಕಾಲಿಕ ಮರಣಕ್ಕೆ ತುತ್ತಾದ ಮಕ್ಕಳು, ಅಸ್ತಮಾ, ಟೀಬಿಗೆ ಬಲಿಯಾದ ಜೀವಗಳ ನೆನಪಿಗೆ, ಶ್ರದ್ಧಾಂಜಲಿ ಸಲ್ಲಿಸಲೋ ಎಂಬಂತೆ ಬರುವ, ಪ್ರತಿ ಹನ್ನೆರೆಡು ವರುಷಕ್ಕೊಮ್ಮೆ ಸರಿಯಾಗಿ ಬದುಕಿ ಉಳಿದ ಮನುಷ್ಯ ಸಂಕುಲಗಳನ್ನು ಮಾತನಾಡಿಸಿ ಸಂತೈಸಲೆಂಬಂತೆ ಹೂ ಅರಳುತ್ತದೆ.
ಕಲ್ಲು ಮಣ್ಣುಗಳ ನಡುವೆ ಮನುಷ್ಯ ಸಮುದಾಯದ ಹತಾಶೆ, ದಿಗ್ಭಮೆ, ಹಗೆತನ, ನೋವುಗಳ ಹತ್ತಿಕ್ಕಲು ಇಂತಹ ಹೂವುಗಳ ಅರಳುವಿಕೆಯಿಂದ ಕೆಲ ಸಮಯದವರೆಗಾದರೂ ನಿರಾಳತೆಯನ್ನು ಅನುಭವಿಸಬಹುದು. ಆಧುನಿಕ ವಿಜ್ಞಾನ ಸೃಷ್ಟಿಸಿದ ಗಣಿಗಾರಿಕೆಯಿಂದಾಗಿ ಭಸ್ಮಾಸುರನಂತೆ ನಾಶವಾಗುವ ಮುನ್ನ ತುಸು ಸಮಯವಾದರೂ ನಿರಾಳತೆ ಯನ್ನು ಅನುಭವಿಸುವ ಅವಕಾಶವನ್ನು ಪ್ರಕೃತಿ ನೀಡಿದೆ.
ನೀಲಕುರುಂಜಿ ಹೂಗಳು ಕೂಡ ಈಗ ಮೌನ
ಘೋರ್ಪಡೆಯಂತಹ ಅರಮನೆಯ ಮನುಷ್ಯ ಕಂ ಬಿಜಿ ರಾಜಕಾರಣಿ ಬಹಳಷ್ಟು ಸಮಯವನ್ನು ಯಾಕೆ ಪ್ರಕೃತಿಯೊಂದಿಗೆ, ಪ್ರಾಣಿ ಪಕ್ಷಿಗಳೊಂದಿಗೆ ಸಂವಾದಿಸುತ್ತ ಕಾಲ ಕಳೆಯುತ್ತಿದ್ದರು? ಎಂಬುದಕ್ಕೆ ಉತ್ತರಿಸಲು ನೀಲಕುರುಂಜಿ ಹೂಗಳು ಕೂಡ ಈಗ ಮೌನವಾಗಿವೆ.
ಇನ್ನೂ ಎಂಟು ವರ್ಷ ಕಾಯಬೇಕು
ನೀಲಕುರುಂಜಿ ಮಹಾದರ್ಶನಕ್ಕೆ ಇನ್ನೂ ಎಂಟು ವರ್ಷ ಕಾಯಬೇಕು. ಅಲ್ಲಿಯವರೆಗೂ ಅವುಗಳ ನಿಶಬ್ದ ರೋದನ ನಮ್ಮನ್ನು ಸುತ್ತುತ್ತಿರುತ್ತದೆ. ಅಲ್ಲಿಯವರೆಗೆ ಷಣ್ಮುಖಸ್ವಾಮಿ ಸಹ ಹುಡುಗಿಯ ಹಿಂದೆ ಬೀಳುವಂತಿಲ್ಲ.!
ಮತ್ತೆ …ನೀಲಕುರುಂಜಿ ಅರಳಲಿ.ಮನುಷ್ಯರ ಮೊಗವೂ ಅರಳಲಿ.
ಬಿ.ಶ್ರೀನಿವಾಸ