ದಾವಣಗೆರೆ: ಇಲ್ಲಿನ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳನ್ನು ದೊಡ್ಡಬಾತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್ಡುಗಳಲ್ಲಿ ವಾಸ ಮಾಡುತ್ತಿರುವ ನಿರಾಶ್ರಿತರ ಗೋಳಿನ ಕಥೆ ಈಗ ಮತ್ತಷ್ಟು ಗಂಭೀರವಾಗಿದೆ. ಇಷ್ಟು ದಿನ ಚಳಿ, ಬಿಸಿಲಿಗೆ , ವಿಷಜಂತುಗಳ ಹಾವಳಿಯಿಂದ ಹೈರಾಣಾಗಿದ್ದ ಜನರು ಬದುಕು ಈಗ ಮಳೆ ಮತ್ತು ಗಾಳಿಗೆ ಅಕ್ಷರಶಃ ಬೀದಿಗೆ ಬಿದ್ದಿದೆ
ಗುರುವಾರ ರಾತ್ರಿ ಸುರಿದ ಮಳೆ ಗಾಳಿಗೆ ನೂರಕ್ಕೂ ಹೆಚ್ಚುಕುಟುಂಬಗಳ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಹಲವು ಮನೆಗಳ ಮೇಲೆ ವಿದ್ಯುತ್ ಕಂಬಗಳು ಉರುಳಿವೆ. ಅದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆಗಳು ನಾಶವಾಗಿರುವ ಹಿನ್ನಲೆಯಲ್ಲಿ ಜನರು ಬೀದಿಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.
ಊರ ಒಳಗೆ ಇದ್ದ ನಮ್ಮನ್ನು ಯಾರು ಇಲ್ಲದ ಜಾಗದಲ್ಲಿ ತಾತ್ಕಾಲಿಕ ಶೆಡ್ನಿರ್ಮಾಣ ಮಾಡಿ ಇಲ್ಲಿಗೆ ಕಳುಹಿಸಿದ್ದಾರೆ. ಇಲ್ಲಿಗೆ ಬಂದು ಆರು ತಿಂಗಳಾಯಿತು. ಇಲ್ಲಿ ಚಳಿ, ಬಿಸಿಲಿಗೆ ನಲುಗಿ ಈಗ ಮಳೆ ನಮ್ಮ ಬದುಕು ಕಸಿದಿದೆ , ನಾವು ಕೂಲಿ ಮಾಡಿ ಜೀವನನಡೆಸುತ್ತಿದ್ದು,ನಮಗೆ ಬಾಡಿಗೆ ಕಟ್ಟಲು ಆಗಲ್ಲ. ಈಗ ಬಿದ್ದ ಮನೆಯಲ್ಲಿ ಹೇಗೆ ವಾಸಮಾಡಬೇಕು. ರಾತ್ರಿ ಮಳೆಗೆ ವಿದ್ಯುತ್ ಕಂಬಗಳು ಬಿದ್ದಿವೆ. ಅದೃಷ್ಟವಶಾತ್ ಮನೆಯಲ್ಲಿ ವಯಸ್ಸಾದವರು ಹಾಗೂ ಮಕ್ಕಳಿದ್ದರು ಅವರಿಗೆ ಏನು ಅಪಾಯವಾಗಿಲ್ಲ ಎಂದು ನಿರಾಶ್ರಿತ ಜನರು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ
ವಿದ್ಯುತ್ ಇಲ್ಲ, ಕುಡಿಯಲು ಶುದ್ದ ನೀರಿಲ್ಲ. ಬಯಲೇ ನಮಗೆ ಶೌಚಾಲಯವಾಗಿದೆ. ನಮಗೆ ಏನಾದರೂ ಬೇಕಾದರೆ 8 ಕಿಮಿ ದೂರ ಹೋಗಬೇಕು. ಮೂಲಭೂತ ಸೌಕರ್ಯ ಇಲ್ಲದ ಜಾಗಕ್ಕೆನಮ್ಮನ್ನು ತಂದು ಬಿಟ್ಟ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕೈ ತೊಳೆದು ಕೊಂಡಿದೆ. ಕೂಡಲೇ ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ
ಮೂಲಭೂತ ಸೌಕರ್ಯ ಇಲ್ಲದ ಜಾಗಕ್ಕೆ ಜನರನ್ನು ತಂದು ಬಿಟ್ಟು ಅವರ ಬಗ್ಗೆ ಗಮನಹರಿಸದೆ ಜಿಲ್ಲಾಡಳಿತ ಮೌನಕ್ಕೆ ಜಾರಿದೆ ಇದು ಸ್ಪಷ್ಟವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಒಂದು ತಿಂಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿ ಜನರನ್ನು ಇಲ್ಲಿಗೆ ತಂದು ಬಿಟ್ಟು ನಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಮಹಾನಗರ ಪಾಲಿಕೆಯಿದೆ. ಜನರಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಹೇಳಿದರೆ ನೀತಿ ಸಂಹಿತೆ ನೆಪ ಹೇಳುತ್ತಾರೆ. ಅಂದರೆ ಇವರ ಬದುಕಿಗೆ ಬೆಲೆ ಇಲ್ಲವೇ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷ ರಾದ ಜಬೀನಾ ಖಾನ್ಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ..