Kannada News | Dinamaanada Hemme | Dinamaana.com | 05-07-2024
1993ರ ಬೇಸಿಗೆಯ ಒಂದು ಮಧ್ಯಾಹ್ನ,ಯುನಿವರ್ಸಿಟಿಯ ವಿಶಾಲ ಜಾಗಗಳ ತುಂಬಾ ಮುಳ್ಳು ಬೋರೆಹಣ್ಣಿನ ಗಿಡಗಳಲಿ ತುಂಬಿನಿಂತ ಹಣ್ಣುಗಳು . ಬಿರುಬಿಸಿಲಿನಲೂ ಆಗೊಮ್ಮೆ ಈಗೊಮ್ಮೆ ತೂಕಡಿಸುವ ಗಾಳಿಗೆ ಪುಳಕ್ಕನೆ ಉದುರುವ ಸದ್ದು ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಪರೀಕ್ಷಾ ಸಮಯವಾದ್ದರಿಂದ ಓಡಾಟವೂ ಹೆಚ್ಚೇನಿರಲಿಲ್ಲ.
ಅಲ್ಲಿಂದ ನಡಕೊಂಡು ಹೊರಟಿದ್ದ ಹಿರಿಯ ಜೀವವೊಂದು ಪಟಕ್ಕನೆ ನೆಲದ ಮೇಲೆ ಬಿದ್ದ ಆ ಹಣ್ಣಿಗೆ ಮೆತ್ತಿದ್ದ ಮಣ್ಣ ಜೊತೆಗೇ ಬಾಯಿಗೆ ಹಾಕ್ಕೊಂಡು ,ಅಷ್ಟೇ ರಭಸದಲ್ಲಿ ಬೀಜವನ್ನು ಪುಳಕ್ಕನೆ ಉಗುಳಿ ಹೋದರು.ಇಷ್ಟೆಲ್ಲಾ ನೋಡೋದಕ್ಕೆ ಸಾಧ್ಯವಾದದ್ದು ಅವರು ತೊಟ್ಟ ಮುದುರು ಮುದುರಾದ ಕೆಂಪಂಗಿಯಿಂದ. ನಮ್ಮ ಬಾಲ್ಯವನ್ನು ನೆನಪಿಸಿದ ಆ ಮನುಷ್ಯನೆಡೆಗೆ ವಿಚಿತ್ರ ಆಕರ್ಷಣೆ ಮೂಡಿತು.
ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ..
ಮತ್ತೊಂದು ದಿನ, ಗುಲಬರ್ಗಾದ ಬಡೇಪುರ ಕಾಲೊನಿಯ ಆ ಸ್ಟುಡೆಂಟ್ ಮೆಸ್ಸಿನಲಿ,ಬಿಸಿ ಬಿಸಿ ಬಕರಿ, ಬ್ಯಾಳಿಯನ್ನು ಸದ್ದು ಮಾಡುತ್ತ,ಮಧ್ಯೆಮಧ್ಯೆ ಸೊರ್…ಸೊರ್ರೆಂದು ಮೊಸರು ಕುಡಿಯುತ್ತ ಬಾಯಿಗೆ,ಮೂಗಿಗೆ ಹತ್ತಿದ್ದನ್ನೂ ಒರೆಸಿಕೊಳ್ಳದೆ ಉಂಡ ಸಂತೃಪ್ತಿಯಲಿ ಎದ್ದು ಹೋದ ,ಅದೇ ಕೆಂಪಂಗಿಯ ಮನುಷ್ಯನನ್ನು ಆ ದಿನವೂ ನೋಡಿದೆ. ಹೀಗೆ,ಮೊದಲ ಮತ್ತು ನಂತರದ ಎರಡ್ಮೂರು ಒನ್ ವೇ ಭೇಟಿಗಳಲಿ , ದಲಿತ ಪ್ಯಾಂಥರ್ ಪದ್ಯಗಳ ಚನ್ನಣ್ಣ ವಾಲೀಕಾರ ಎಂಬ ಬಂಡಾಯ ಸಾಹಿತಿ ಇವರೇ ಎಂಬುದು ತಿಳಿಯಿತು.
ನಮ್ಮ ಫಿಜಿಕ್ಸ್ ವಿಭಾಗದ ರಸ್ತೆಯ ಮುಂದೆ ಸ್ವಲ್ಪ ಕೂಗಳತೆಯ ದೂರದಲ್ಲಿಯೇ ಕನ್ನಡ ವಿಭಾಗವಿತ್ತು.ಹೈಸ್ಕೂಲಿನಿಂದಲೂ ಕನ್ನಡ ಸಾಹಿತ್ಯದ ಗೀಳಿಗೆ ಬಿದ್ದಿದ್ದ ನಾನು,ಕೂಡ್ಲಿಗಿಯ ಸರ್ಕಾರಿ ಲೈಬ್ರರಿಯಲಿ ಓದಿದ ಪುಸ್ತಕಗಳ ಹಲವು ಲೇಖಕರ ಪೈಕಿ ಮಲ್ಲಿಕಾ ಘಂಟಿ, ವಿಜಯಶ್ರೀ ಸಬರದ….ಚನ್ನಣ್ಣ ವಾಲೀಕಾರ,ಮ.ಗು.ಬಿರಾದಾರ,ಲಠ್ಠೆ,ಕಾಶೀನಾಥ ಅಂಬಲಗಿ,ಹೀಗೆ ಹಲವರು ಅಲ್ಲಿದ್ದರು.
ಅವರೆಲ್ಲರ ಪೈಕಿ, ವಾಲೀಕಾರರು ಬಳಸುತ್ತಿದ್ದ,ಅಲ್ಲೋ ತಮ್ಮಾ,ಯವ್ವಾ ಅಕ್ಕಾ, ತಂಗಿ, ತಾಯಿ…ಅಣ್ಣಾ..ಎಂಬ ಸಂಬೋಧನೆಗಳು ಆ ಕಾಲದ ಹುಡುಗ ಹುಡುಗಿಯರಿಗೆ ತಮಾಷೆಯಂತೆ ತೋರಿದ್ದೂ ಉಂಟು.
ದಪ್ಪ ದಪ್ಪನೆಯ ಅಕ್ಷರ ಬರೆಯುತ್ತಿದ್ದರು…
ಆಗ ತಾನೆ ವಯಸ್ಕರ ಶಿಕ್ಷಣದಿಂದ ಶಾಲೆಯಲಿ ಅಕ್ಷರ ಕಲಿತು ಬಂದವರ ಹಾಗೆ ದಪ್ಪ ದಪ್ಪನೆಯ ಅಕ್ಷರಗಳನು ಬರೆಯುತ್ತಿದ್ದರು. ದಾರೀಲಿ ಹೋಕ್ತಾ ಬರ್ತಾ ಯಾವುದೋ ಹಾಡು ಗುನುಗುತ್ತಾ ಸಾಗುತ್ತಿದ್ದರು. ಆ ಹಾಗೂ ಅಂತಿಂಥಾ ಹಾಡಲ್ಲ.ಅದು ಸಿದ್ಧಲಿಂಗಯ್ಯನವರದೋ, ಗದ್ದರ್ ಹಾಡೋ …ಕೈ ಬೆರಳುಗಳು ಹೊರಗೆ ಬಾರಿಸುತ್ತಿರುವಂತೆ ಚಲಿಸುತ್ತಿದ್ದವು.ಅವರು ಹಾಗೆ ನಡೆದು ಹೋಗುತ್ತಿದ್ದರೆ ಬಹುಶಃ ನಾವು ಹತ್ತಿರ ಹೋಗಿ ಆಲಿಸಿದರೆ ಹಲಿಗೆ ಬಾರಿಸುವ ಸದ್ದೂ ಕೇಳಿಸುತ್ತಿದೆಯೇನೋ ಎಂಬಂತೆ ಕಾಣಿಸುತ್ತಿತ್ತು.
ಆಗಿನ ಗುಲಬರ್ಗಾದ ಜಗತ್ ಸರ್ಕಲ್ಲಿನಲ್ಲಿ ಪಿಕ್ ಪಾಕೆಟ್ಟಿನ ಹುಡುಗರು ಬಸ್ಸು ಹತ್ತುತ್ತಿದ್ದರು . ಹಾಗೆಯೇ ಇಳಿಯುವವರ ಜೇಬುಗಳನ್ನೂ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಜೇಬುಗಳಿಗೆ ಕತ್ತರಿ ಹಾಕುತ್ತಿದ್ದರು.ಹೀಗೆ ಒಂದು ದಿನ ಜಗತ್ ಸರ್ಕಲ್ಲಿನಲ್ಲಿ ಬಸ್ಸು ಹತ್ತಿದ ಚೆನ್ನಣ್ಣ ವಾಲೀಕಾರರು ಯುನಿವರ್ಸಿಟಿಯವರೆಗೂ ಸಿಟಿ ಬಸ್ಸಿನಲಿ ಕುಂತ ವಿದ್ಯಾರ್ಥಿಗಳ ಎದುರು ಜೋತಾಡುತ್ತ ನಿಂತುಕೊಂಡೇ ಪಯಣಿಸುತ್ತಿದ್ದರು.
ಆಗ ಇದ್ದಕ್ಕಿದ್ದಂತೆ ಒಬ್ಬ ಯುವಕ ಅದು ಹೇಗೋ ಜನರ ಕೈಗೆ ಸಿಕ್ಕಿ ಹಾಕಿಕೊಂಡುಬಿಟ್ಟ.ರೋಸಿಹೋದ ಜನರು ಆ ಯುವಕನನ್ನು ಮನೆ ಬಂದಂತೆ ಥಳಿಸತೊಡಗಿದರು.ಆಗ ನಿಂತುಕೊಂಡೇ ಹಾಡು ಗುನುಗುತ್ತಿದ್ದ ವಾಲೀಕಾರರು ಯುವಕನ ರಕ್ಷಣೆಗೆ ಧಾವಿಸಿ ಬಂದರು.ಮಾಸಲು ಮಾಸಲಿನ ಕೆಂಪು ಶರ್ಟಿನ ವಾಲೀಕಾರರ ದೇಹವು ಯಾವುದೇ ಕೋನದಲ್ಲಿಯೂ ಸಹ ಅವರೊಬ್ಬ ಪ್ರಾಧ್ಯಾಪಕರು ಎಂದು ಯಾರೂ ಕೂಡ ಊಹಿಸಲಸಾಧ್ಯವಾಗಿತ್ತು.ಈತ ಕಳ್ಳನ ಸಂಬಂಧಿಕನೇ ಇರಬೇಕೆಂದು ಜನರು ಆಕ್ರೋಶಭರಿತರಾದರು.
ಆಗ ಆ ಬಸ್ಸಿನಲ್ಲಿ ನಮ್ಮನ್ನು ಬಿಟ್ಟರೆ ಕನ್ನಡ ವಿಭಾಗದ ಯಾವೊಬ್ಬ ವಿದ್ಯಾರ್ಥಿಗಳೂ ಇರಲಿಲ್ಲ.ಚನ್ನಣ್ಣನವರು ಸುತ್ತಲೂ ನೋಡುತ್ತಿದ್ದರು.ಪರಿಚಿತ ಮುಖಗಳಾವುವೂ ಕಾಣಿಸದೆ ಗಾಬರಿಯಾದಂತೆ ಕಂಡರು. ನನ್ನ ಜೊತೆಯಲ್ಲಿದ್ದ ಟೀಕಾ ಕೃಷ್ಣಮೂರ್ತಿಗಾಗಲೀ ,ರುದ್ರಗೌಡ, ಪೋಲೀಸ್ ಪಾಟೀಲ್ ಎಂಬ ಭೌತವಿಜ್ಞಾನ ವಿಭಾಗದ ನನ್ನ ಗೆಳೆಯರಿಗೆ ಚೆನ್ನಣ್ಣ ವಾಲೀಕಾರರು ಪರಿಚಯವೇ ಇರಲಿಲ್ಲ.ಆದರೆ ನನಗೆ ನನ್ನೂರಿನ ಗೌರ್ನಮೆಂಟ್ ಲೈಬ್ರರಿಯಲ್ಲಿ ದಲಿತರ ಪ್ಯಾಂಥರ್ ಪದ್ಯಗಳ ಮೂಲಕ ಇವರು ಪರಿಚಿತರಾಗಿದ್ದರು.ಪುಸ್ತಕದ ಬೆನ್ನಿಗೆ ಇವರ ಚಿತ್ರವನ್ನು ನೋಡಿದ್ದು ಸಹಾಯಕ್ಕೆ ಬಂದಿತ್ತು.
ಆಗ ನನ್ನ ಗೆಳೆಯರೊಂದಿಗೆ ಹೇಗೋ ಮಾಡಿ ಉದ್ರಿಕ್ತ ಜನರಿಂದ ರಕ್ಷಿಸಬೇಕಾಯಿತು. “ಹೇ….ತಮ್ಮಂದಿರಾ,ಯಾವ ಡಿಪಾರಾಟ್ಮೆಂಟನವರೋ ನೀವು?”ಎಂದು ಕೇಳಿ, “ಪಾಪ,ಆ ಕಳ್ಳ ಭಾಳ ಹಸಗೊಂಡಿದ್ದ “ಎಂದು ಮನದಲ್ಲಿಯೇ ವಾಲೀಕಾರರು ನೊಂದುಕೊಂಡಿದ್ದರು.
Read also : ದಿನಮಾನದ ಹೆಮ್ಮೆ : ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರು
ಯುನಿವರ್ಸಿಟಿಯಲಿದ್ದೂ,ಪ್ರೊಫೆಸರಂತಾಡದೆ,ಸುಕ್ಕು ಸುಕ್ಕಾದ ಕೆಂಪು ಅಂಗಿ ,ದೊಗಳೆ ಪ್ಯಾಂಟು, ಮೆತ್ತಿದ ಧೂಳಿನ ಹಳೆಯ ಚಪ್ಪಲಿ,ಬಾಚಲಾರದ ಕೂದಲ ,ಉರುಟು ಉರುಟಾದ ಮುಖದ ತುಂಬಾ ….ಮಗುವಿನ ಮುಗ್ಧ ನಗೆ ಹೊತ್ತವರಿಗೆ ಎಷ್ಟೊಂದು ಹೊರನೋಟ!!
ತಾಯಿ ಹೃದಯದಿಂದ ಚನ್ನಣ್ಣ ಅಜರಾಮರ..
ಒಳಗೆ ಅವ್ವನಂತಿದ್ದ,ಚನ್ನಣ್ಣರು ಬಂದೋರನ್ನು ಸ್ವಾಗತಿಸಿ ಅಪ್ಪಿಕೊಳ್ಳುವುದ ನೋಡೋದೆ ಒಂದ್ ಖುಷಿ. ಸಾಫ್ ಸೀದಾ ಮನುಷ್ಯನೊಬ್ಬನನ್ನು, ಸಮಾಜ ಗುರುತಿಸದೇ ಹೋದರೂ, ತನ್ನ ವಿಶಿಷ್ಟ ಸಾಹಿತ್ಯ ಕೃತಿಗಳಿಂದ ಮತ್ತು ತಾಯಿ ಹೃದಯದಿಂದ ಚನ್ನಣ್ಣ ಅಜರಾಮರವಾಗಿ ಹೋದರು.
ನೀ ಹೋದ ಮರುದಿನ ಮೊದಲಾಂಗ ನಮ ಬದುಕು ಆಗ್ಯದ ಬಾಬಾಸಾಹೇಬ ….ಎಂದು ಹೇಳುವ ನೋವಿನಲ್ಲಿಯೇ ಚನ್ನಣ್ಣ ವಿರಮಿಸಿದ್ದಾರೆ. ಇಷ್ಟಾದರೂ ಚನ್ನಣ್ಣನ ಕುರಿತ
“ಚನ್ನಣ್ಣನಿಗೆ ಉಣ್ಣು ಎಂದರೆ ಸಾಕು,
ತೀರಿಸಿಕೊಂಡುಬಿಡುತ್ತಾನೆ ಶತಮಾನಗಳ ಸೇಡು”
ಚಂಪಾ ಕೊಟ್ಟ ರೂಪಕ ಮರೆಯಲಾರದಂತೆ ಮನದಲಿ ಅಚ್ಚೊತ್ತಿದಂತೆ ನಿಂತಿದೆ.
ಈ ದಿನ ನೀವಿಲ್ಲ ಎಂಬ ಸುದ್ದಿಯ ಜೊತೆಗೆ ನಾ ಬರೆವ ಅಕ್ಷರಗಳೂ…ದಪ್ಪಗಾಗಿ ನಿಮ್ಮ ನೆನಪು ತಂದಿತು.
ಬರೆಯಲು ಕಾಗದ ಸಾಲುತ್ತಿರಲಿಲ್ಲ
ಹಾಡಲು ಶುರುಮಾಡಿದ,
ಹಲಗೆಯಲಿ ಬಾರಿಸಿದ, ಕುಣಿದೇ ಕುಣಿದ,
ದಣಿದ
ಆಕಾಶವನ್ನೆ ಸಿಲೇಟಿನಂತೆ ಬಳಸಿದ
ಕಾಣದಾದಾಗ
ಕ್ರಾಂತಿ ಮೆಟ್ಟಿದ ಕೆಂಪಂಗಿ ಧರಿಸಿದ
ಒಮ್ಮೆ
ಮಗುವಂತೆ
ಮಗದೊಮ್ಮೆ
ಶತಮಾನಗಳ ಕಾಲ ಹಸಿದವರು ಉಂಬಂತೆ
ಹೋಗುವ ಮುನ್ನ ಉಣ್ಣುವುದ ಮತ್ತೊಮ್ಮೆ ನೋಡಬೇಕಿತ್ತು,
ಉಂಡ ಮ್ಯಾಲೆ ಹಾಡುವುದು ಕೇಳಬೇಕಿತ್ತು
ಅವಸರದಿ
ಹೋಗಿಬಿಟ್ಟಿರಿ ನೀವು
ಊರೂರಿಗೆ ಕೆಂಪಂಗಿ ತೊಟ್ಟ ಹುಡುಗರ ಕಾಣುವ ಕನಸು ಕಾಣುತ್ತಲೆ ಹೋಗಿಬಿಟ್ಟಿರಿ
ಹೋಗಿಬಿಟ್ಟಿರಿ ನೀವು ಪ್ಯಾಂಥರ್ ಹಾಡುಗಳ ಗುನುಗುತ್ತಾ…
ಬಿ.ಶ್ರೀನಿವಾಸ