ದಾವಣಗೆರೆ, ಏ.24- ಬದುಕಿನಲ್ಲಿ ಬಾಲ್ಯದಿಂದಲೂ ಅನುಭವಿಸಿದ ಸಂಕಷ್ಟಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಂಡು, ಮಹಾ ಮಾನವತಾವಾದಿಯಾಗಿ ಬೆಳೆದ ಡಾ. ಅಂಬೇಡ್ಕರ್ ಜಗತ್ತಿನ ಸರ್ವಕಾಲಿಕ ಹತ್ತು ಸರ್ವಶ್ರೇಷ್ಠರಲ್ಲಿ ಒಬ್ಬರು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾ ವಕೀಲರ ಸಂಘದಲ್ಲಿ ಆಚರಿಸಿದ ಡಾ. ಅಂಬೇಡ್ಕರ್ರವರ 133ನೇ ಜಯಂತಿಯ ನಿಮಿತ್ತ ಏರ್ಪಡಿಸಿದ್ದ 8ನೇ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೆಹರ್ ಜಾತಿಯ ತನ್ನ ತಂದೆ-ತಾಯಿಗಳಿಗೆ ಹದಿನಾಲ್ಕನೇ ಮಗನಾಗಿ ಜನಿಸಿ, ಅಪಾರ ವಿದ್ವತ್ತುಗಳಿಸಿ, ಅನೇಕ ಹುದ್ದೆಗಳನ್ನು ನಿರ್ವಹಿಸಿ, ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಒಂದು ಶ್ರೇಷ್ಠ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಮುಂದಿನ ಒಂದು ಶತಮಾನಕ್ಕೆ ಆಗುವಷ್ಟು ಆಲೋಚನೆಗಳನ್ನು ಬಿಟ್ಟು ಹೋಗಿದ್ದಾರೆ. ತಮ್ಮ ಸಂಪಾದಕತ್ವದ“ಮೂಕನಾಯಕ” ಬಹಿಷ್ಕತ ಭಾರತ” “ಹೆಸಕಾರಿಣಿ ಸಭಾ” ಹಾಗೂ ತಾವೇ ಕಟ್ಟಿದ ರಾಜಕೀಯ ಪಕ್ಷದ ಮೂಲಕ ಜನತೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ ಹೋಗಿದ್ದಾರೆ ಎಂದು ಹೇಳಿದರು.
ನಿಷ್ಪಪಕ್ಷಪಾತ ನಿಲುವು, ಯಾರ ಬಗ್ಗೆಯೂ ಅಸೂಯೆ ಪಡದ ಅಂಬೇಡ್ಕರ್ ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಜೀವನವನ್ನು ಸವೆಸಿದ ಅಂಬೇಡ್ಕರ್ರವರ ಬದುಕು ಮತ್ತು ಸಾಧನೆಯ ಪ್ರಸ್ತುತತೆಯನ್ನು ಬಿಲ್ಲಪ್ಪ ವಿವರಿಸಿ ಹೇಳಿದರು.
ಅಂಧಶ್ರದ್ಧೆಗಳಿಂದ ದೂರವಾಗಿ, ಆಲೋಚನಾ ದಾಟಿಯನ್ನು ಬದಲಾಯಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎಂದು ಅಂಬೇಡ್ಕರ್ ದೃಢವಾಗಿ ನಂಬಿದ್ದರು. ಅವರು ರಚಿಸಿದ ಸಂವಿಧಾನ ಒಂದು ಜೀವಂತ ಚಲನಶೀಲ ದಾಖಲೆ ಎಂದು ವರ್ಣಿಸಿದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ.ವಿ. ವಿಜಯಾನಂದ ಜಯಂತಿಯ ಅರ್ಥಪೂರ್ಣ ಆಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಾವು ಹೆಚ್.ಬಿಲ್ಲಪ್ಪನವರ ಶಿಷ್ಯ ಎಂದು ನೆನಪಿಸಿಕೊಂಡರು.
ಹಿರಿಯ ವಕೀಲರಾದ ಬಿ.ಎಂ. ಹನುಮಂತಪ್ಪ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿಶೇಷವಾಗಿ ಉಲ್ಲೇಖಿಸಿದರು.
ಸಮಾರಂಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ದಾವಣಗೆರೆ ವಲಯದ ಹಿರಿಯ ಕಾನೂನು ಅಧಿಕಾರಿ ಎ.ಎಂ. ಬಸವರಾಜ, ಸರ್ಕಾರಿ ಅಭಿಯೋಜಕ ಬಿ.ಮಂಜುನಾಥ, ಜಿಲ್ಲಾ ಸರ್ಕಾರಿ ವಕೀಲರಾದ ಎಸ್. ಪ್ರಕಾಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಭÉಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಲ್.ಹೆಚ್. ಅರುಣಕುಮಾರ್ ಮಾತನಾಡಿ, ಇಂದಿನ ಯುವಕರಿಗೆ ಸಂವಿಧಾನದ ಪ್ರಸ್ತುತತೆಯನ್ನು ತಿಳಿಸುವುದು ಅತ್ಯಗತ್ಯವಾಗಿದೆ. ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ವಕೀಲ ವೃಂದದ ಮೇಲಿದೆ ಎಂದರು.
ಆರಂಭದಲ್ಲಿ ಹೆಗ್ಗೆರೆ ರಂಗಪ್ಪ ವಚನ ಗೀತೆ ಹಾಗೂ ಅಂಬೇಡ್ಕರ್ ಕುರಿತ ಗೀತೆಯನ್ನು ಹಂಚಿದರು. ವಕೀಲ ಗುಮ್ಮನೂರು ಮಲ್ಲಿಕಾರ್ಜುನ ಅಂಬೇಡ್ಕರ್ ಕುರಿತ ಸ್ವ-ರಚಿತ ಎರಡು ಕಿರು ಕವನಗಳನ್ನು ವಾಚಿಸಿದರು.
ವಕೀಲರ ಸಂಘದ ವತಿಯಿಂದ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಕಾನೂನು ಅಧಿಕಾರಿ ಬಸವರಾಜ ಎ.ಎಂ. ಸರ್ಕಾರಿ ಅಭಿಯೋಜಕರಾದ ಬಿ.ಮಂಜುನಾಥ ಜಿಲ್ಲಾ ಸರ್ಕಾರಿ ವಕೀಲರಾದ ಎಸ್. ಪ್ರಕಾಶ್ ಹಾಗೂ ವಕೀಲರಾದ ಕೆ.ಹೆಚ್. ಹನುಮಂತಪ್ಪ, ಇವರುಗಳನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ ವಂದಿಸಿದರು. ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು.