ದಾವಣಗೆರೆ : ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಗೆ ಅಗತ್ಯವಿರುವ 16,568 ಮೆಟ್ರಿಕ್ ಟನ್ ಯೂರಿಯಾ ಪೂರೈಕೆ ಮಾಡಬೇಕೆಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾದ ಜೆ.ಪಿ.ನಡ್ಡಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಕೇಂದ್ರ ಸಚಿವರನ್ನು ನಿಯೋಗದೊಂದಿಗೆ ಭೇಟಿಯಾದ ಸಂಸದರು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ ಮುಂಗಾರು ಮಳೆ ಉತ್ತಮವಾಗಿದ್ದು ರೈತರಿಗೆ ಯೂರಿಯಾ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿದರು.
ದಾವಣಗೆರೆ ಕ್ಷೇತ್ರದಲ್ಲಿ 2025 ರ ಮುಂಗಾರು ಹಂಗಾಮಿಗೆ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಒಟ್ಟು 54,162 ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ. ಏಪ್ರಿಲ್ ನಿಂದ ಜುಲೈವರೆಗೆ ಸುಮಾರು 24,388 ಮೆಟ್ರಿಕ್ ಟನ್ ವರೆಗೂ ಯೂರಿಯಾ ಬಂದಿದೆ ಎಂದು ತಿಳಿಸಿದರು.
ಪ್ರಸ್ತುತ ಕ್ಷೇತ್ರದಲ್ಲಿ 37,594 ಮೆಟ್ರಿಕ್ ಟನ್ ಅವಶ್ಯಕತೆ ಇದೆ ಎಂದು ಗಮನಸೆಳೆದರು.
Read also : ಉಸಿರು ಕಟ್ಟುವ ಸ್ಥಳದಲ್ಲಿ ಮಕ್ಕಳಿಗೆ ಪಾಠ ! ಮಂಡಕ್ಕಿ ಭಟ್ಟಿ ಲೇಔಟ್ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ
ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಅವಧಿಗೂ ಮುನ್ನ ಆರಂಭವಾಗಿದ್ದು, ಮಳೆ ಪ್ರಮಾಣ ಶೇ. 41 ರಷ್ಟು ಹೆಚ್ಚಾಗಿದೆ ಆದ್ದರಿಂದ ಬಿತ್ತನೆ ಪ್ರಮಾಣ ಶೇ. 103 ರಷ್ಟು ಹೆಚ್ಚಾಗಿದ್ದು, ಯೂರಿಯಾ ಬೇಡಿಕೆಯು ಅಂದಾಜು ಅಗತ್ಯಕ್ಕಿಂತ ಹೆಚ್ಚಾಗಿದೆ. ಇದನ್ನು ಮನಗಂಡು
ಅಗತ್ಯವಿರುವ 16,568 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಪೂರೈಕೆ ಮಾಡಲು ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದರುಗಳಾದ ಸಾಗರ್ ಖಂಡ್ರೆ, ಕುಮಾರ್ ನಾಯ್ಕ್, ತುಕಾರಾಂ ಅವರುಗಳು ನಿಯೋಗದಲ್ಲಿದ್ದರು.