ವಿಧಾನಸೌಧದ ಮೂರನೇ ಅಂತಸ್ತಿನಲ್ಲಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರ ಕೊಠಡಿಯಲ್ಲಿ ಮೊನ್ನೆ ಶುಕ್ರವಾರ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ ಮಾತನಾಡಿದ ಸಚಿವರ ಪಡೆ ಒಂದು ನಿರ್ಣಾಯಕ ಹೆಜ್ಜೆ ಇಡಲು ತೀರ್ಮಾನಿಸಿದೆ.
ಮುಂದಿನ ದಿನಗಳಲ್ಲಿ ಉದ್ಭವವಾಗುವ ರಾಜಕೀಯ ಸನ್ನಿವೇಶವನ್ನು ಎದುರಿಸಲು ನಾವು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಬೇಕು ಎಂಬುದು ಈ ತೀರ್ಮಾನ.ಅರ್ಥಾತ್,ಮುಂದಿನ ಕೆಲವೇ ದಿನಗಳಲ್ಲಿ ಅಹಿಂದ ವರ್ಗಗಳ ಶಕ್ತಿಯನ್ನು ತೋರ್ಪಡಿಸುವ ಬೃಹತ್ ಸಮಾವೇಶ ನಡೆಸುವುದು ಈ ಸಚಿವರ ತೀರ್ಮಾನ.
ಅಂದ ಹಾಗೆ ಗೃಹ ಸಚಿವ ಪರಮೇಶ್ವರ್ ಅವರ ಕೊಠಡಿಯಲ್ಲಿ ನಡೆದ ಈ ಸಭೆಯಲ್ಲಿದ್ದವರು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ. ಗಮನಿಸಬೇಕಾದ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ ಈ ಫೋರ್ ಮ್ಯಾನ್ ಆರ್ಮಿ ಪದೇ ಪದೇ ಸಭೆ ಸೇರುತ್ತಿದೆ.ಅಷ್ಟೇ ಅಲ್ಲ, ಒಂದು ಅಜೆಂಡಾ ಸೆಟ್ ಮಾಡಿ ಅದರ ಅನುಸಾರ ಹೆಜ್ಜೆ ಇಡುತ್ತಿದೆ.
ಮೂಲಗಳ ಪ್ರಕಾರ: ಸಿದ್ಧರಾಮಯ್ಯ ಅವರು ಸಿಎಂ ಆಗಿರುವವರೆಗೆ ಈ ಫೋರ್ ಮ್ಯಾನ್ ಆರ್ಮಿ ಯಾವ ತಕರಾರೂ ಎತ್ತುವುದಿಲ್ಲ.ಆದರೆ ಒಂದು ವೇಳೆ ಸಿದ್ಧರಾಮಯ್ಯ ಅವರು ಕೆಳಗಿಳಿಯುವ ಸನ್ನಿವೇಶ ನಿರ್ಮಾಣವಾದರೆ ಸಿಎಂ ಹುದ್ದೆಗೆ ಲಗ್ಗೆ ಹಾಕುವುದು ಅದರ ನಿರ್ಧಾರ. ಎಷ್ಟೇ ಆದರೂ ಪರಮೇಶ್ವರ್ ಅವರು ಎಂಟು ವರ್ಷ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದವರು.ಅಷ್ಟೇ ಅಲ್ಲ.ನಾಲ್ಕು ದಶಕಗಳಿಂದ ಪಕ್ಷಕ್ಕಾಗಿ ದುಡಿದವರು.ಹೀಗಾಗಿ ಪರ್ಯಾಯ ನಾಯಕತ್ವದ ಪ್ರಶ್ನೆ ಬಂದರೆ ಪರಮೇಶ್ವರ್ ತಮ್ನ ಏಕೈಕ ಕ್ಯಾಂಡಿಡೇಟು ಎಂಬುದು ಈ ಫೋರ್ ಮ್ಯಾನ್ ಆರ್ಮಿಯ ತೀರ್ಮಾನ.
ಹೀಗೆ ಅಜೆಂಡಾ ಸೆಟ್ ಮಾಡಿಕೊಂಡು ಫೀಲ್ಡಿಗಿಳಿದಿರುವ ಫೋರ್ ಮ್ಯಾನ್ ಆರ್ಮಿ,ಸಿದ್ಧರಾಮಯ್ಯ ಅವರು ಕೆಳಗಿಳಿದರೆ ಅವರ ಜಾಗಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬರಬೇಕು ಎಂಬ ವಾದವನ್ನು ಒಪ್ಪುತ್ತಿಲ್ಲ.ಕಾರಣ ಕೇಳಿದರೆ:ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಮಾತ್ರ ಪಕ್ಷ ಕಟ್ಟಿದರಾ? ನಾವು ಕಟ್ಟಿಲ್ಲವಾ?ಅಂತ ಪಕ್ಷದ ವರಿಷ್ಟರಿಗೇ ಮೆಸೇಜು ಕಳಿಸುತ್ತಿದೆ.
ನೋಡುತ್ತಾ ಹೋದರೆ ತಮ್ಮ ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಎಲ್ಲರೂ ಶಕ್ತಿಶಾಲಿಗಳೇ.ಇಲ್ಲದಿದ್ದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ತಮ್ಮ ಪುತ್ರಿಯನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗುತ್ತಿತ್ತೇ? ಅಥವಾ ಚಾಮರಾಜನಗರ ಕ್ಷೇತ್ರದಿಂದ ತಮ್ಮ ಪುತ್ರ ಸುನೀಲ್ ಭೋಸ್ ಅವರನ್ನು ಗೆಲ್ಲಿಸಿಕೊಂಡು ಬರಲು ಮಹಾದೇವಪ್ಪ ಅವರಿಗೆ ಸಾಧ್ಯವಾಗುತ್ತಿತ್ತೇ? ಇದಕ್ಕೆ ಹೋಲಿಸಿ ನೋಡಿದರೆ ಎಷ್ಟು ಮಂದಿ ಕಾಂಗ್ರೆಸ್ ನಾಯಕರು ತಮ್ಮ ಕುಟುಂಬದವರನ್ನು,ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ? ಹೀಗಾಗಿ ಪಕ್ಷ ಕಟ್ಟಿದವರು ಎಂಬ ಹೆಸರಿನಲ್ಲಿ ಶಾಸಕರನ್ನು ಬುಲ್ಡೋಜ್ ಮಾಡಿ ಪರ್ಯಾಯ ನಾಯಕನ ಆಯ್ಕೆ ಆಗಬಾರದು.ಬದಲಿಗೆ ಶಾಸಕಾಂಗ ನಾಯಕನ ಆಯ್ಕೆಗಾಗಿ ಶಾಸಕಾಂಗ ಸಭೆ ನಡೆಸಲೇಬೇಕು ಎಂಬುದು ಈ ಫೋರ್ ಮ್ಯಾನ್ ಆರ್ಮಿಯ ಮಾತು.
ಹೀಗಾಗಿಯೇ ಅದು ಮುಂದಿನ ದಿನಗಳಲ್ಲಿ ಉದ್ಭವವಾಗುವ ರಾಜಕೀಯ ಸನ್ನಿವೇಶ ತನಗೆ ಪ್ಲಸ್ ಆಗಲಿ ಎಂಬ ಕಾರಣಕ್ಕಾಗಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಇದಕ್ಕೆ ಮತ್ತೊಂದು ಕಾರಣವೆಂದರೆ ಕೇಂದ್ರದ ಜಾರಿ ನಿರ್ದೇಶನಾಲಯ. ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅದು ಆಗಾಗ ಸಿಎಂ ಸಿದ್ಧರಾಮಯ್ಯ ಅವರಿಗೆ ಲೈಟ್ ಶಾಕ್ ಕೊಡುತ್ತಿದೆ.ಮತ್ತದು ಇಂತಹ ಶಾಕ್ ಕೊಟ್ಟಾಗಲೆಲ್ಲ ಡಿಕೆಶಿ ಆಪ್ತ ಶಾಸಕರು ರಪಕ್ಕಂತ ಮೇಲೆದ್ದು ನಿಂತು ಸಿಎಂ ಆಯ್ಕೆ ಹೈಕಮಾಂಡ್ ತೀರ್ಮಾನವೇ ಹೊರತು ಶಾಸಕರದಲ್ಲ ಎಂಬಂತಹ ಗರ್ನಲ್ಲುಗಳನ್ನು ಬಿಸಾಡುತ್ತಿದ್ದಾರೆ.
ಇಂತಹ ಸನ್ನಿವೇಶದಲ್ಲಿ ತಾವು ಮೈ ಮರೆತು ಕೂರಬಾರದು ಎಂಬುದು ಫೋರ್ ಮ್ಯಾನ್ ಆರ್ಮಿ ತೀರ್ಮಾನ.ಇದರ ಪರಿಣಾಮವಾಗಿಯೇ ಅದೀಗ ತನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಪರ್ಯಾಯಕ್ಕೆ ಖರ್ಗೆ ರೆಡಿ? (Political analysis)
ಹೀಗೆ ಫೋರ್ ಮ್ಯಾನ್ ಆರ್ಮಿ ವತಿಯಿಂದ ಪರ್ಯಾಯ ನಾಯಕತ್ವಕ್ಕೆ ಡಾ.ಪರಮೇಶ್ವರ್ ಅವರ ಹೆಸರು ಮುಂದೆ ಬಂದಿರುವುದೇನೋ ಸರಿ.ಆದರೆ ಪರ್ಯಾಯ ನಾಯಕತ್ವದ ವಿಷಯ ಬಂದರೆ ದಿಲ್ಲಿಯ ಕಂಪೋಂಡಿನಿಂದ ಬೇರೆಯೇ ಕತೆ ಕೇಳಿ ಬರುತ್ತಿದೆ.
ಅದರ ಪ್ರಕಾರ,ಮುಖ್ಯಮಂತ್ರಿ ಹುದ್ದೆಯಿಂದ ಸಿದ್ಧರಾಮಯ್ಯ ಕೆಳಗಿಳಿಯುವುದೇ ಆದರೆ ಆ ಜಾಗಕ್ಕೆ ಬರಲು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರೆಡಿ ಇದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಸಿದ್ಧರಾಮಯ್ಯ ಅವರ ಜಾಗಕ್ಕೆ ಬರಲು ಡಿ.ಕೆ.ಶಿವಕುಮಾರ್ ರೆಡಿ ಇರುವುದೇನೋ ನಿಜ.ಆದರೆ ಸಿದ್ಧರಾಮಯ್ಯ ಗ್ಯಾಂಗು ಮಾತ್ರ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಆಗಿ ನೋಡಲು ಬಯಸುತ್ತಿಲ್ಲ.ಪರಿಣಾಮ?ಪರ್ಯಾಯ ನಾಯಕತ್ವಕ್ಕೆ ಯಾರು?ಎಂಬ ಪ್ರಶ್ನೆ ಮೇಲೆದ್ದರೆ ಡಿಕೆಶಿ ವರ್ಸಸ್ ಪರಮೇಶ್ವರ್ ನಡುವೆ ಸಂಘರ್ಷ ಶುರುವಾಗುತ್ತದೆ.
ಈ ಸಂಘರ್ಷ ವಿಕೋಪಕ್ಕೆ ಹೋದರೆ ಕಾಂಗ್ರೆಸ್ ವರಿಷ್ಟರು ಇಬ್ಬರಿಗೂ ಬೇಡ.ಮೂರನೆಯವರು ಬರಲಿ ಅನ್ನಬಹುದು. ಅಂದ ಹಾಗೆ ಲೋಕಸಭಾ ಚುನಾವಣೆಗೂ ಮುನ್ನ ಇಂತಹ ಮಾತು ಶುರುವಾದಾಗ ರಾಹುಲ್ ಗಾಂಧಿ ಮಧ್ಯೆ ಪ್ರವೇಶಿಸಿದ್ದರಂತೆ. ‘ಖರ್ಗೇಜಿ.ಯಾವ ಕಾರಣಕ್ಕೂ ನೀವು ರಾಜ್ಯ ರಾಜಕಾರಣಕ್ಕೆ ಹೋಗಬೇಡಿ ಈ ಸಲ ದಿಲ್ಲಿ ಗದ್ದುಗೆಯ ಮೇಲೆ ನಾವೇ ಕೂರುತ್ತೇವೆ.ಆಗ ಸಹಜವಾಗಿಯೇ ನೀವು ಟಾಪ್ ಲೆವೆಲ್ಲಿಗೆ ಹೋಗುತ್ತೀರಿ ಎಂದಿದ್ದರಂತೆ.
ಹೀಗೆ ರಾಹುಲ್ ಗಾಂಧಿ ಅವರು ಖರ್ಗೆಯವರಿಗೆ ಹೇಳಿದ ಮಾತು ಕರ್ನಾಟಕದಲ್ಲಿ ಅನುರಣಿಸಿತ್ತಲ್ಲದೆ,ಲೋಕಸಭೆ ಚುನಾವಣೆಯ ನಂತರ ಖರ್ಗೆ ಪ್ರಧಾನಿ ಆದರೆ ಅಚ್ಛರಿಪಡಬೇಡಿ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಲೋಕಸಭಾ ಚುನಾವಣೆಯಲ್ಲಿ ಪವಾಡ ನಡೆಯಲಿಲ್ಲ.ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿಯಲಿಲ್ಲ. ಹೀಗಾಗಿ ಖರ್ಗೆಯವರಿಗೆ ಕರ್ನಾಟಕದ ರಾಜಕಾರಣಕ್ಕೆ ಹಿಂತಿರುಗುವ ಮನಸ್ಸಾಗಿದೆ.ಹಾಗಂತ ಅವರೇನೂ ಬಹಿರಂಗವಾಗಿ ತಮ್ಮ ಆಸೆಯನ್ನು ತೋಡಿಕೊಂಡಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ಅವರ ಬಳಿ ಮಾತನಾಡಿದ ಬಹುತೇಕ ಕಾಂಗ್ರೆಸ್ ನಾಯಕರಿಗೆ ಅವರಿಗಿರುವ ಏಕೈಕ ಕೊರಗಿನ ಕುರುಹು ಸಿಗುತ್ತಿದೆ.
ಯಾಕೆಂದರೆ ತಮ್ಮ ಬಳಿ ಕಷ್ಟ ಹೇಳಲು ಬರುವ ಹಲವು ನಾಯಕರ ಬಳಿ ತಮ್ಮ ನೋವನ್ನು ತೋಡಿಕೊಳ್ಳುತ್ತಿರುವ ಖರ್ಗೆಯವರು:’ನಿಮ್ಮದು ಕಷ್ಟ ಎನ್ನುತ್ತೀರಿ.ಆದರೆ ನನ್ನ ನೋವು ಏನು ಅಂತ ಹೇಳಲಿ?1999 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾನು ಸಿಎಂ ಆಗಬೇಕಿತ್ತು.ಆದರೆ ಅದು ಎಸ್.ಎಂ.ಕೃಷ್ಣ ಅವರ ಪಾಲಾಯಿತು.
ಇನ್ನು 2004 ರಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿ ಜೆಡಿಎಸ್ ಜತೆ ಸೇರಿ ಮೈತ್ರಿ ಸರ್ಕಾರ ಮಾಡುವುದು ಅನಿವಾರ್ಯವಾದಾಗ ನಾನೇ ಸಿಎಂ ಆಗಬೇಕಿತ್ತು.ವರಿಷ್ಟರ ಆಯ್ಕೆ ಕೂಡಾ ನಾನೇ ಆಗಿದ್ದೆ.ಆದರೆ ಮಾಜಿ ಪ್ರಧಾನಿ ದೇವೇಗೌಡರು ನನ್ನ ಬದಲು ಧರ್ಮಸಿಂಗ್ ಸಿಎಂ ಆಗಲಿ ಅಂತ ಒತ್ತಡ ಹೇರಿ ಅವಕಾಶ ತಪ್ಪಿಸಿದರು.
ಹೋಗಲಿ,2008 ರಲ್ಲಿ ಪಕ್ಷೇತರರ ಜತೆ ಕೈ ಜೋಡಿಸಿ ಕಾಂಗ್ರೆಸ್-ಜೆಡಿಎಸ್ ಅಧಿಕಾರದ ಸನಿಹ ಬಂದಾಗ ಖರ್ಗೆ ನೇತೃತ್ವದಲ್ಲಿ ಸರ್ಕಾರ ರಚಿಸೋಣ ಅಂತ ದೇವೇಗೌಡರು ಕಾಂಗ್ರೆಸ್ ವರಿಷ್ಟರಿಗೆ ಮೆಸೇಜ್ ಕಳಿಸಿದರು.ಆದರೆ ನಾನೆಲ್ಲಿ ಸಿಎಂ ಆಗುತ್ತೇನೋ ಅಂತ ನಮ್ಮವರೇ ಪಕ್ಷೇತರರ ಶಕ್ತಿ ಬಿಜೆಪಿಗೆ ದಕ್ಕುವಂತೆ ಮಾಡಿದರು.2013 ರಲ್ಲಿ ಸಿದ್ಧರಾಮಯ್ಯ ಎಂಟರ್ ಆಗಿ ನನಗೆ ಅವಕಾಶ ತಪ್ಪಿ ಹೋಯಿತು.
ಹೀಗೆ ನೋಡುತ್ತಾ ಹೋದರೆ ಒಂದಲ್ಪ,ಎರಡಲ್ಲ ಹಲವು ಬಾರಿ ನನಗೆ ಸಿಎಂ ಹುದ್ದೆ ತಪ್ಪಿದೆ ಅಂತ ನೋವು ತೋಡಿಕೊಳ್ಳುತ್ತಿದ್ದಾರೆ.ಅರ್ಥಾತ್,ಒಂದು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ತಮ್ಮ ಕನಸು ಈಡೇರದ ಬಗ್ಗೆ ಖರ್ಗೆ ತುಂಬ ಕೊರಗುತ್ತಿದ್ದಾರೆ. ಹೀಗೆ ಕೊರಗು ಉಳಿದಿದೆ ಎಂದರೆ ಅದನ್ನು ಪರಿಹರಿಸಿಕೊಳ್ಳುವ ಆಸೆ ಅವರಿಗಿದೆ ಅಂತಲೇ ಅರ್ಥ ಎಂಬುದು ದಿಲ್ಲಿಯ ಕಾಂಗ್ರೆಸ್ ನಾಯಕರ ಮಾತು.
ಅಮಿತ್ ಷಾ ಆಟ ಬಲ್ಲವರಾರು?(Political analysis)
ಈ ಮಧ್ಯೆ ಆಂತರಿಕ ಸಂಘರ್ಷದಿಂದ ಕಂಗಾಲೆದ್ದು ಹೋಗಿರುವ ರಾಜ್ಯ ಬಿಜೆಪಿಯ ಇಬ್ಬಣಗಳಿಗೆ ಕೇಂದ್ರ ಸಚಿವ ಅಮಿತ್ ಷಾ ಹಲ್ವಾ ತಿನ್ನಿಸುತ್ತಿದ್ದಾರೆ. ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಅಂತ ಯತ್ನಾಳ್ ಅಂಡ್ ಟೀಮು ಪಟ್ಟು ಹಿಡಿದಿದ್ದರೆ,ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲೇಬೇಕು.ಮುಂದಿನ ವಿಧಾನಸಭಾ ಚುನಾವಣೆಯನ್ನು ವಿಜಯೇಂದ್ರ ನೇತೃತ್ವದಲ್ಲೇ ಎದುರಿಸಬೇಕು ಅಂತ ಮತ್ತೊಂದು ಟೀಮು ವರಿಷ್ಟರ ಮೇಲೆ ಒತ್ತಡ ಹೇರುತ್ತಿದೆ.
ಈ ಗೊಂದಲದ ನಡುವೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದ ಬುಧವಾರ ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ಫೋನು ಮಾಡಿದ್ದಾರೆ. ‘ಸಾರ್,ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಅಂತ ವಿನಾಕಾರಣ ಕೆಲವರು ಗಲಾಟೆ ಮಾಡುತ್ತಿದ್ದಾರೆ.ನೋಡಿದರೆ ಇದೇಕೋ ಅತಿಯಾಯಿತು ಅನ್ನಿಸುತ್ತಿದೆ.ಈ ಬಗ್ಗೆ ನಾನು ಪದೇ ಪದೇ ಕಂಪ್ಲೇಂಟು ಕೊಟ್ಟರೂ ಪ್ರಯೋಜನವಾಗುತ್ತಿಲ್ಲ.ಹೀಗಾದರೆ ನಾವು ಪಕ್ಷ ಕಟ್ಟುವುದಾದರೂ ಹೇಗೆ?’ಅಂತ ನೋವು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಸಮಾಧಾನಿಸಿದ ಅಮಿತ್ ಷಾ:’ಡೋಂಟ್ ವರಿ ಯಡೂರಪ್ಪಾಜಿ. ನನಗೆ ಕರ್ನಾಟಕದ ಫೀಡ್ ಬ್ಯಾಕು ಬಂದಿದೆ.ಅದರ ಆಧಾರದ ಮೇಲೆ ಹೇಳುತ್ತೇನೆ.ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಸೆಟ್ಲ್ ಆಗುತ್ತಾರೆ.ಇದಾದ ನಂತರ ಯತ್ನಾಳ್ ಮತ್ತಿತರರು ಏನು ಮಾಡಲು ಸಾಧ್ಯ?ಹೀಗಾಗಿ ಈ ವಿಷಯದ ಬಗ್ಗೆ ತುಂಬ ಯೋಚಿಸಬೇಡಿ.ಯತ್ನಾಳ್ ಮತ್ತಿತರರ ಮೇಲೆ ಹರಿಹಾಯದಂತೆ ನಿಮ್ಮ ಕಡೆಯವರಿಗೆ ಸೂಚನೆ ಕೊಡಿ’ ಎಂದಿದ್ದಾರೆ.
ಯಾವಾಗ ಅಮಿತ್ ಷಾ ಬಾಯಲ್ಲಿ ಈ ಮಾತು ಬಂತೋ? ಇದಾದ ನಂತರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ವಿಜಯೇಂದ್ರ ಪರ ನಡೆಯುತ್ತಿದ್ದ ಸಭೆಗಳಿಗೆ ಯಡಿಯೂರಪ್ಪ ಬ್ರೇಕ್ ಹಾಕಿದ್ದಾರೆ.
ಯತ್ನಾಳ್ ಬಣಕ್ಕೂ ಹಲ್ವಾ (Political analysis)
ಹೀಗೆ ಒಂದು ಕಡೆಯಿಂದ ಯಡಿಯೂರಪ್ಪ ಅವರನ್ನು ಸಮಾಧಾನಿಸಿದ ಅಮಿತ್ ಷಾ ಮತ್ತೊಂದು ಕಡೆಯಿಂದ ಯತ್ನಾಳ್ ಅಂಡ್ ಟೀಮಿನ ಬಾಯಿಗೆ ಬೀಗ ಹಾಕಿದ್ದಾರಾ?ಅಂತ ನೋಡಿದರೆ ಅದರ ಸಣ್ಣ ಸುಳಿವೂ ಸಿಗುವುದಿಲ್ಲ.
ಬದಲಿಗೆ ಮೊನ್ನೆ ದಿಲ್ಲಿಗೆ ಹೋದ ವಿಜಯೇಂದ್ರ ಅವರಿಗೆ ಅಮಿತ್ ಷಾ ಕ್ಲಾಸು ತಗೊಂಡಿದ್ದಾರೆ ಎಂಬ ಸುದ್ದಿ ಯತ್ನಾಳ್ ಟೀಮಿನಲ್ಲಿ ಅನುರಣಿಸುತ್ತಿದೆ.
ಅದರ ಪ್ರಕಾರ,ದಿಲ್ಲಿಗೆ ಹೋದ ವಿಜಯೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಷಾ ಅವರು:ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ನೀವು ವಿಫಲರಾಗಿದ್ದೀರಿ.ಇದು ಒಳ್ಳೆಯದಲ್ಲ ಅಂತ ಹೇಳಿದ್ದಾರೆ..ಹಾಗೆಯೇ,ನಿಮಗೆ ಬೇಕಾದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಿರುವ ಕ್ರಮವೂ ಸರಿ ಇಲ್ಲ ಅಂತ ಝಾಡಿಸಿದ್ದಾರೆ.
ಹೀಗೆ ಅವರಾಡಿದ ಮಾತು ಕೇಳಿ ಸುಸ್ತಾದ ವಿಜಯೇಂದ್ರ ಬೇರೆ ದಾರಿ ಕಾಣದೆ ರಾಜ್ಯಕ್ಕೆ ವಾಪಸಾಗಿದ್ದಾರೆ ಎಂಬುದು ಯತ್ನಾಳ್ ಕ್ಯಾಂಪಿನ ಮಾತು. ಹೀಗೆ ರಾಜ್ಯ ಬಿಜೆಪಿಯ ಇಬ್ಬಣಗಳಿಗೂ ಒಂದೊಂದು ಮೆಸೇಜು ರವಾನಿಸಿ ಸಮಾಧಾನಿಸುತ್ತಿರುವ ಅಮಿತ್ ಷಾ ಅಂತಿಮವಾಗಿ ಯಾವ ಆಟ ಆಡುತ್ತಾರೋ ಗೊತ್ತಿಲ್ಲ.ಆದರೆ ಬಿಜೆಪಿಯಲ್ಲಿರುವ ತಟಸ್ಥ ಬಣದ ಪ್ರಕಾರ:ವಿಜಯೇಂದ್ರ ಸಧ್ಯದಲ್ಲೇ ರಾಜ್ಯಾಧ್ತಕ್ಷರಾಗಿ ಸೆಟ್ಲ್ ಆಗಲಿದ್ದಾರೆ.ಆದರೆ ಪದಾಧಿಕಾರಿಗಳ ಪಟ್ಟಿಯಲ್ಲಿರುವ ಅವರ ಹಲವು ಆಪ್ತರು ಹೊರಬಿದ್ದು,ಭಿನ್ನರ ಟೀಮಿನ ಹಲವರು ಒಳಗೆ ಬರಲಿದ್ದಾರೆ.
ಲಾಸ್ಟ್ ಸಿಪ್ (Political analysis)
ಇನ್ನು ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿಯಾಗಿರುವ ರಾಧಾಮೋಹನ ದಾಸ್ ಅಗರ್ವಾಲ್ ಎತ್ತಂಗಡಿಯಾಗುವ ಕುರುಹುಗಳು ಕಾಣಿಸಿಕೊಂಡಿವೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದ ಅಗರ್ವಾಲ್ ಚೆನ್ನಾಗಿಯೇ ಕೆಲಸ ಮಾಡಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿಗೆ ಗುನ್ನ ಹೊಡೆಯಲು ಯತ್ನಿಸಿದವರ ಗುಡ್ ದಾ ಅಲುಗಾಡಿಸಿದ್ದರು.ಪರಿಣಾಮ?ಕರ್ನಾಟಕದಲ್ಲಿ ಮಿತ್ರಕೂಟ 19 ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ ಮೇಲೆ ಅಮಿತ್ ಷಾ ಅವರೇ ಅಗರ್ವಾಲ್ ಗೆ ಶಭಾಷ್ ಗಿರಿ ಕೊಟ್ಟಿದ್ದರು.
ಆದರೆ ಹೀಗೆ ಮೆಚ್ಚುಗೆ ಪಡೆದ ಅಗರ್ವಾಲ್ ಬರಬರುತ್ತಾ ಬಾಸ್ ಗೆಟಪ್ಪಿಗೆ ತಿರುಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಇತ್ತೀಚೆಗೆ ಶ್ರೀರಾಮುಲು ಎಪಿಸೋಡು ಭುಗಿಲೇಳಲೂ ಅಗರ್ವಾಲ್ ಕಾರಣ ಎಂಬುದು ರಹಸ್ಯವಾಗುಳಿದಿಲ್ಲ.ಪರಿಣಾಮ?ಕರ್ನಾಟಕ ಬಿಜೆಪಿಯಲ್ಲಿ ಅಗರ್ವಾಲ್ ಗೋ ಬ್ಯಾಕ್ ಎಂಬ ಕೂಗು ಶುರುವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ,ಅಗರ್ವಾಲ್ ಅವತಾರಗಳ ಬಗ್ಗೆ ಕೆಲ ನಾಯಕರು ಅಮಿತ್ ಷಾ ಅವರಿಗೆ ದೂರು ನೀಡಿದ್ದಾರೆ.
Read also : Political analysis | ಡಿಕೆಶಿಗೆ ಮಾತ್ರ ಸಿಎಂ ಹುದ್ದೆಯ ಛಾನ್ಸು?
ಆರ್.ಟಿ.ವಿಠ್ಠಲಮೂರ್ತಿ