ಚಿತ್ರದುರ್ಗ (chitraduraga): ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷಕುಮಾರನನ್ನು ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ನಾಪತ್ತೆಯಾಗಿದ್ದ ಹಂತಕರ ಪೈಕಿ 10 ಜನ ಮಂಗಳವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಹತ್ತು ಜನರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿತ್ರದುರ್ಗಡಿವೈಎಸ್ಪಿದಿನಕರ್ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕಣುಮ ಸಂತೋಷನ ಹತ್ಯೆ ಮಾಡಿ, ಬಸ್ ಮೂಲಕ ತಾವು ಹೊಳಲ್ಕೆರೆಗೆ ಬಂದಿರುವುದಾಗಿ ಪೊಲೀಸರ ಮುಂದೆ ಆರೋಪಿಗಳು ಹೇಳಿದ್ದಾರೆ.
ಇತ್ತ ಕಣುಮನ ಹಂತಕರು ಹೊಳಲ್ಕೆರೆ ಠಾಣೆಯಲ್ಲಿ ಶರಣಾಗಿರುವ ವಿಷಯ ತಿಳಿಯುತ್ತಿದ್ದಂತೆ ಹಂತಕರ ಪತ್ತೆಗೆ ರಚನೆಯಾಗಿದ್ದ ದಾವಣಗೆರೆ ನಗರ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆಯುವ ಪ್ರಕ್ರಿಯೆ ಕೈಗೊಳ್ಳಲು ತೆರಳಿದೆ.
ಇನ್ನು ವಿಚಾರಣೆ ನಂತರ ಕಣುಮನ ಹತ್ಯೆ ಆರೋಪಿಗಳನ್ನು ನ್ಯಾಯಾಧೀಶರ ಸಮಕ್ಷಮದಲ್ಲಿ ಹಾಜರುಪಡಿಸಿ, ದಾವಣಗೆರೆಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.
ದಾವಣಗೆರೆ ಭಾರತ ಕಾಲನಿ ನಿವಾಸಿ ಸಂತೋಷ್ ಅಲಿಯಾಸ್ ಚಾವಳಿ ಸಂತೋಷ, ಕಾರ್ತಿಕ್, ಪ್ರಭು, ನವೀನ್ ಅಲಿಯಾರ್ಬಾಕ್ರಿ, ರಾಜ ಅಲಿಯಾಸ್ ತಾರಕ್ ರಾಜ, ನವೀನ್ ಅಲಿಯಾಸ್ ಸೈಲೆಂಟ್ ನವೀನ, ಮಾರುತಿ, ಬಸವರಾಜ ಅಲಿಯಾಸ್ ಪಿಂಕಿ, ಜಯಸೂರ್ಯ, ಭರತ್ ಅಲಿಯಾಸ್ ಸ್ಲಂ ಪೊಲೀಸರಿಗೆ ಶರಣಾಗಿದ್ದು, ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ಹೇಳಲಾಗಿದೆ.
ಘಟನೆ ವಿವರ: ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ರಿಕ್ರಿಯೇಷನ್ ಕ್ಲಬ್ನಲ್ಲಿ ಕಾಂಗ್ರೆಸ್ ಮುಖಂಡ ಕಣುಮ ಸಂತೋಷ ಸೇರಿದಂತೆ ಬಿಜೆಪಿ ಮುಖಂಡರು, ಇತರೆ ವ್ಯಕ್ತಿಗಳು ಜೆ ರಿಕ್ರಿಯೇಷನ್ ಕ್ಲಬ್ ನಲ್ಲಿ ಕುಳಿತಿದ್ದ ವೇಳೆ ಏಳೆಂಟು ಜನರ ಗುಂಪು ಅಲ್ಲಿಗೆ ನುಗ್ಗಿ ಏಕಾಏಕಿ ಮಚ್ಚು, ಲಾಂಗ್ ಗಳಿಂದ ಕಣುಮನನ್ನೇ ಗುರಿಯಾಗಿಸಿಕೊಂಡು, ಮುಖ, ಕೈ,ಕುತ್ತಿಗೆ ಮೇಲೆ ದಾಳಿ ಮಾಡಿ, ಬರ್ಬರವಾಗಿ ಹತ್ಯೆ ಮಾಡಿತ್ತು.
Read also : crime news | ದಾವಣಗೆರೆಯಲ್ಲಿ ರೌಡಿಶೀಟರ್ ಸಂತೋಷ್ (ಕಣುಮ) ಬರ್ಬರ ಹತ್ಯೆ
ಮೃತ ಕಣುಮ ಸಂತೋಷನ ಪತ್ನಿ ಟಿ.ಕೆ.ಶೃತಿ, ತನ್ನ ಪತಿ ಸಂತೋಷಕುಮಾರ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ಸಂಜೆ ತಮ್ಮ ಸಂಬಂಧಿ ಮಂಜುನಾಥ ತನಗೆ ಕರೆ ಮಾಡಿ, ಸಂತೋಷ್ ಗೆ ಸೋಮೇಶ್ವರ ಆಸ್ಪತ್ರೆ ಎದುರಿನ ಕಟ್ಟಡದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಪತಿಯನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಿ, ಕಾನೂನು ಕ್ರಮ ಒತ್ತಾಯಿಸಿದರು.
“12 ಜನರ ವಿರುದ್ದ ದೂರು : ರೌಡಿ ಶೀಟರ್, ಕಾಂಗ್ರೆಸ್ ಮುಖಂಡ ಸಂತೋಷಕುಮಾರ ಅಲಿಯಾಸ್ ಕಣುಮ ಸಂತೋಷನ ಕೊಲೆಗೆ ಸಂಬಂಧಿಸಿದಂತೆ 12 ಮಂದಿಸೇರಿದಂತೆ ಇತರರ ವಿರುದ್ಧ ಮೃತನ ಪತ್ನಿ ಟಿ.ಕೆ.ಶೃತಿ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದ ವಾಸಿಗಳಾದ ಗುಂಡಪ್ಪ, ಭಾರತ್ ಕಾಲನಿಯಕಾರ್ತಿಕ್, ಬೂದಾಳ್ ರಸ್ತೆಯ ನವೀನ್, ಖಾರದ ಪುಡಿ ನವೀನ್ (ಖಾರದ ಪುಡಿ ಮಂಜನ ತಮ್ಮ), ಚಾವಳಿ ಸಂತು ಅಲಿಯಾಸ್ ಚಾವಳಿ ಸಂತೋಷ, ಅಲಿಯಾಸ್ ಬಸವರಾಜ ಬಸ್ಯಾಷ ಹನುಮಂತಪ್ಪ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಅಲಿಯಾಸ್ ಪಚ್ಚಿ, 60 ಅಡಿ ರಸ್ತೆಯ ಗಣಿ ಮತ್ತು ಇತರರು ತನ್ನ ಪತಿ ಸಂತೋಷಕುಮಾರ ಅಲಿಯಾಸ್ ಕಣುಮ ಸಂತೋಷನನ್ನು ಕೊಲೆ ಮಾಡಿರುವುದಾಗಿ ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.