ದಾವಣಗೆರೆ : ಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೆನಪು ಮಾಡುತ್ತದೆ ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಜಿಲ್ಲೆಯ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಅತ್ಯಂತ ಸರಳ ರೀತಿಯಲ್ಲಿ ಮಕ್ಕಳಿಗೆ ತಿಳಿಸುವಂತೆ ಮಾಡುವುದಲ್ಲದೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗುತ್ತದೆ ಎಂದರು.
ಪೊಲೀಸ್ ಪಬ್ಲಿಕ್ ಶಾಲೆಯು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ. ಅಷ್ಟೇ ಅಲ್ಲದೆ ಮಕ್ಕಳು ಕಲಿಕೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಪ್ರಗತಿಯನ್ನು ಕಾಣುತ್ತಾ ರಾಷ್ಟ್ರದ ಸಂಪತ್ತಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಮಕ್ಕಳು ಎದುರಿಸುವ ಮಾನಸಿಕ ಹಾಗೂ ದೈಹಿಕ ಸವಾಲುಗಳನ್ನು ಶಿಕ್ಷಕರು ಅರಿತು ಪರಿಹಾರ ಕಂಡುಕೊಳ್ಳುವ ಮೂಲಕ ಮಕ್ಕಳ ಸಾಮಾಜಿಕ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿ ಕೊಡಬೇಕೆಂದು ಶಿಕ್ಷಕರಿಗೆ ತಿಳಿ ಹೇಳಿದರು.
ಡಿಎಆರ್ ಡಿವೈಎಸ್ಪಿ ಪ್ರಕಾಶ್ ಪಿ ಬಿ ಮಾತನಾಡಿ, ಪ್ರಜಾಪ್ರಭುತ್ವ ಎಂಬುದು ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಬೇಕು ಎಂಬ ಗಾಂಧೀಜಿಯವರ ಮಾತನ್ನು ನೆನಪಿಸುತ್ತ ಶಾಲಾ ಸಂಸತ್ತು ಚುನಾವಣಾ ಆಯೋಗದ ನೈಜ ಕಾರ್ಯ ಮಾದರಿಯನ್ನು ನೆನಪಿಸುತ್ತದೆ ಎಂದರು.
ಮಕ್ಕಳು ಶಿಸ್ತು ಮತ್ತು ಜವಾಬ್ದಾರಿಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕೆಂದು ಹೇಳಿದರು.
ಶಾಲಾ ವಿದ್ಯಾರ್ಥಿ ಮಂಡಳಿಯ ನಾಯಕನಾಗಿ ಸಾತ್ವಿಕ್ ಎಸ್ ಕಾಡಜ್ಜಿ, ನಾಯಕಿಯಾಗಿ ವೇದ ಎಂ, ಕ್ರೀಡಾ ನಾಯಕಿಯಾಗಿ ಯಶಸ್ವಿನಿ ಬಿ ,ಎಸ್ ಹಾಗೂ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘದ ನಾಯಕನಾಗಿ ಗಣೇಶ್ ಯು ಎಸ್ ರವರು ಆಯ್ಕೆಯಾಗಿದ್ದು ಇವರಿಗೆ ಪದವಿ ಪ್ರಧಾನ ಮಾಡಲಾಯಿತು.
ಶಾಲೆಯ ನಾಲ್ಕು ಹೌಸ್ ಗಳಾದ ಕಾವೇರಿ, ಶರಾವತಿ, ನೇತ್ರಾವತಿ ಹಾಗೂ ಕೃಷ್ಣ ಹೌಸ್ ಗಳ ನಾಯಕ ಮತ್ತು ಉಪನಾಯಕರನ್ನು ಆಯ್ಕೆ ಮಾಡಲಾಯಿತು.
Read also : ಬಿತ್ತನೆ ಬೀಜ, ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ : ಅಂಗಡಿ ತಪಾಸಣೆಗೆ ಸೂಚನೆ
ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಮಂಜುಳಾ ಮಾಗೋಡ್, ದೈಹಿಕ ಶಿಕ್ಷಕ ಹಾಲೇಶ್ ಹಾಗೂ ಸವಿತಾ ,ಹರ್ಷಿಯ, ರಾಜು ಶಾಲೆಯ ಪ್ರಭಾರ ಪ್ರಾಂಶುಪಾಲ ವಿನುತ ಆರ್ ಎನ್, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು.