ದಾವಣಗೆರೆ: ಬಾಲ್ಯದಿಂದಲೇ ಮಕ್ಕಳಿಗೆ ಸ್ವಚ್ಚತೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಲೇಖಕ ಡಾ. ನಾ. ಸೋಮೇಶ್ವರ ಸಲಹೆ ನೀಡಿದರು.
ನಗರದ ದೇವರಾಜ ಅರಸು ಬಡಾವಣೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಸಿಹಿ ಪ್ರಕಾಶನದ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ನಡೆದ `ಸ್ವಚ್ಛ ಮತ್ತು ಸ್ವಸ್ಥ ಸಮಾಜಕ್ಕಾಗಿ ಆಧ್ಯಾತ್ಮಿಕ ಸಬಲೀಕರಣ’ ಸೇವಾ ಯೋಜನೆಯ ಪ್ರಾರಂಭೋತ್ಸವ ಮತ್ತು ಲೇಖಕ ಶಿವಪ್ರಸಾದ ಕರ್ಜಗಿ ಅವರ ಪ್ರಸಾದವಾಣಿ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನೆ ಜತೆಗೆ ಪರಿಸರದ ನೈರ್ಮಲ್ಯ ಕಾಪಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ನೈರ್ಮಲ್ಯ ಕುರಿತು ಪೋಷಕರು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಮಕ್ಕಳ ಮುಂದೆ ಭಾಷಣ ಬಿಗಿಯದೆ, ಸ್ವಚ್ಛತಾ ಕಾರ್ಯ ಕೈಗೊಂಡು ತೋರಿಸಬೇಕು. ಸ್ವಚ್ಛ ಮತ್ತು ಸ್ವಸ್ಥ ಸಮಾಜದ ಮಹತ್ವವನ್ನು ತಿಳಿಸಿ ಮರು ಜಾಗೃತಿಗೊಳಿಸಬೇಕಾದ ಅವಶ್ಯಕತೆ ಇದೆ ಎಂದರು.
ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿರುವ ದುರ್ಬುದ್ಧಿಯ ವರ್ತನೆಯಿಂದ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆಯಂತಹ ದುಷ್ಕøತ್ಯ ನಡೆಯುತ್ತಿವೆ. ಬುದ್ಧಿ ಶುದ್ಧಿಯಾದರೆ ಸಿದ್ಧಿ ಸಿಗಲಿದೆ. ಆಧ್ಯಾತ್ಮದಲ್ಲಿ ಪ್ರವೇಶಿಸಿದರೆ ಸಾತ್ವಿಕತೆ ಬರಲಿದೆ. ಇದರಿಂದ ಕೆಟ್ಟ ಗುಣಗಳು ಕಡಿಮೆಯಾಗಿ, ಒಳ್ಳೆ ಗುಣಗಳು ವೃದ್ಧಿಯಾಗಲಿದೆ. ಸಾತ್ವಿಕತೆಯ ಕಾರಣಕ್ಕಾಗಿಯೇ ಬುದ್ಧ, ಬಸವ, ಅಕ್ಕಮಹಾದೇವಿ ಪ್ರಸಿದ್ಧಿಯಾಗಿದ್ದಾರೆ ಎಂದರು.
ಪ್ರಸಾದವಾಣಿ ಕೃತಿಯ ಲೇಖಕ ಶಿವಪ್ರಸಾದ ಕರ್ಜಗಿ ಅವರಂತಹ ಯುವ ಲೇಖಕರನ್ನು ಬೆಳೆಸಬೇಕಾದರೆ ಕೃತಿಗಳನ್ನು ಖರೀದಿಸಿ ಓದಬೇಕು. ಈ ನಿಟ್ಟಿನಲ್ಲಿ ನಾವು 100 ಕೃತಿ ಖರೀದಿಸಿ, ಮಠಕ್ಕೆ ಬರುವ ಭಕ್ತರಿಗೆ ನೆನಪಿನ ಕಾಣಿಕೆ ನೀಡುತ್ತೇವೆ. ನೀವು ಸಹ ಪುಸ್ತಕ ಖರೀದಿಸಿ ಶುಭ ಸಮಾರಂಭಗಳಿಗೆ ಹೋದಾಗ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಿ ರಾಜಯೋಗಿನಿ ಲೀಲಾಜಿ ಮಾತನಾಡಿ, ನಮ್ಮ ಸಂಸ್ಥೆಯು ಯಾವುದೇ ಮತ, ಜಾತಿ, ಲಿಂಗ ಭೇದವಿಲ್ಲದೇ ಆಧ್ಯಾತ್ಮಿಕ ಶಿಕ್ಷಣ ನೀಡುತ್ತಿದೆ. ಪ್ರಸ್ತುತ ಕೆಲವರು ಆಧ್ಯಾತ್ಮ ಮತ್ತು ಧರ್ಮ ಬೇರೆ, ಬೇರೆಯಾಗಿದ್ದರೂ ಅವುಗಳನ್ನು ಬೆರೆಸಿ ಕಚ್ಚಾಡುತ್ತಿದ್ದಾರೆ. ಶಾಂತಿಯೇ ನಿಜವಾದ ಧರ್ಮವಾಗಿದೆ ಎಂದರು.
ಡಾ.ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಚರಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಸ್ವಾಮಿ ನಾರಾಯಣಾನಂದ ಸರಸ್ವತಿ ಸಾನ್ನಿಧ್ಯವನ್ನು ರಾಜಯೋಗಿನಿ ಅನಸೂಯಾಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಕೆ.ಮಂಜುನಾಥ್, ಬೆಂಗಳೂರಿನ ಕಸಾಪದ ನೇ.ಭ. ರಾಮಲಿಂಗ ಶೆಟ್ಟಿ, ಸಾಹಿತಿ ಶಿವಯೋಗಿ ಹಿರೇಮಠ, ರಾಜೇಂದ್ರಪ್ರಸಾದ್ ನೀಲಗುಂದ, ಕೆ.ವಿ. ಧರಣೇಶ್ ಉಪಸ್ಥಿತರಿದ್ದರು.